ಸುವರ್ಣ ಮಹೋತ್ಸವಕ್ಕೆ ಮೆರುಗು ತಂದ ಕ್ರಿಯೇಟಿವ್ ಡೆಕೋರೇಷನ್ ಟೀಮ್ನ ಹಳ್ಳಿ ಸೊಗಡಿನ ವೇದಿಕೆ
ಸುವರ್ಣ ಮಹೋತ್ಸವಕ್ಕೆ ಮೆರುಗು ತಂದ ಕ್ರಿಯೇಟಿವ್ ಡೆಕೋರೇಷನ್ ಟೀಮ್ನ ಹಳ್ಳಿ ಸೊಗಡಿನ ವೇದಿಕೆ
ದೇವರ ಹಿಪ್ಪರಗಿ : ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆ, ಯಾಳವಾರದಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಹಾಗೂ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 2013ರ ಬ್ಯಾಚ್ ವತಿಯಿಂದ ನಿರ್ಮಿಸಲಾದ ಹಳ್ಳಿ ಸೊಗಡಿನ ವೇದಿಕೆ ಅಲಂಕಾರ ಎಲ್ಲರ ಮನಸೆಳೆಯಿತು.
ಚಲನಚಿತ್ರ ಶೈಲಿಯ ಸ್ಪರ್ಶ ಹೊಂದಿದ್ದ ಈ ವಿಶೇಷ ವೇದಿಕೆಯಲ್ಲಿ ಹಳ್ಳಿಯ ಮನೆಗಳ ಮುನ್ನೋಟ, ಹುಲ್ಲಿನ ಚಪ್ಪರ, ಬಾಳೆಕಂಬ, ಮಾವಿನ ತೋರಣ, ಕಬ್ಬು, ಕಂದೀಲಗಳು, ಎತ್ತಿನ ಬಂಡಿ, ಮಡಕೆಗಳು, ಮಜ್ಜಿಗೆಯ ಗಡಿಗೆ, ಬಿಸುಕಲ್ಲು, ಮರದ ರೊಟ್ಟಿಪುಟ್ಟಿ, ನೆಲವುಗಳು, ನಮ್ಮ ಅಜ್ಜಿಯಂದಿರು ಹೊಲಿಯುತ್ತಿದ್ದ ಕೌದಿ, ನಿಸರ್ಗದ ಸೊಬಗನ್ನು ಪ್ರತಿಬಿಂಬಿಸುವ ಗುಬ್ಬಿ ಗೂಡುಗಳು ಸೇರಿದಂತೆ ಹಲವು ಗ್ರಾಮೀಣ ಪರಿಕರಗಳನ್ನು ಬಳಸಿ ನೈಜ ಹಳ್ಳಿ ವಾತಾವರಣವನ್ನು ನಿರ್ಮಿಸಲಾಗಿತ್ತು.
ವೇದಿಕೆಯಲ್ಲಿ ಅಳವಡಿಸಲಾದ ಗಣೇಶನ ಮೂರ್ತಿ ಹಾಗೂ ಡೊಳ್ಳುಗಳ ಅಲಂಕಾರ ವಿಶೇಷ ಆಕರ್ಷಣೆಯಾಗಿದ್ದು, ಗ್ರಾಮೀಣ ಸಂಸ್ಕೃತಿ ಮತ್ತು ಕನ್ನಡದ ಸೊಗಡನ್ನು ಪ್ರತಿಬಿಂಬಿಸಿತು.
ಈ ವಿಶೇಷ ವೇದಿಕೆ ನಿರ್ಮಾಣವನ್ನು ಕ್ರಿಯೇಟಿವ್ ಡೆಕೋರೇಷನ್ ಟೀಮ್, ತಾಳಿಕೋಟಿ ಅತ್ಯಂತ ಕಲಾತ್ಮಕವಾಗಿ ರೂಪಿಸಿದ್ದು, ಸಾರ್ವಜನಿಕರಿಂದ ಹಾಗೂ ಗಣ್ಯರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಕಲಾವಿದರಾದ ಸತೀಶ ಕೇಮಶೆಟ್ಟಿ, ಶಿವನಗೌಡ ಬಿರಾದಾರ, ಅರುಣ ಕೋಟಗಿ, ನಾಗಯ್ಯ ವಸ್ತ್ರದ, ಭಾಗೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರ ಸಹಯೋಗದೊಂದಿಗೆ ನಿರ್ಮಿಸಲಾದ ಈ ವೇದಿಕೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಈ ಕಾರ್ಯಕ್ಕೆ ಸಹಕರಿಸಿದ 2013ರ ಬ್ಯಾಚ್ನ ಎಲ್ಲ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸಲಾಯಿತು.
