ಬೀದರ್ ,ಕಲಬುರಗಿ ಬೆಂಗಳೂರು ಮಧ್ಯೆ ವಿಶೇಷ ರೈಲು ಇನ್ನು ಖಾಯಂ ಸಂಚಾರ ರೈಲ್ವೆ ಇಲಾಖೆಗೆ ಡಾ.ಉಮೇಶ್ ಜಾಧವ್ ಅಭಿನಂದನೆ
ಬೀದರ್ - ಕಲಬುರಗಿ ಮಧ್ಯೆ ವಿಶೇಷ ರೈಲು ಸೇವೆ ಇನ್ನು ಖಾಯಂ ಸಂಚಾರ ರೈಲ್ವೆ ಇಲಾಖೆಗೆ ಡಾ. ಉಮೇಶ್ ಜಾಧವ್ ಅಭಿನಂದನೆ
ಕಲಬುರಗಿ : ಲೋಕಸಭಾ ಸದಸ್ಯರಾಗಿದ್ದ ವೇಳೆ ರೈಲ್ವೇ ಇಲಾಖೆ ಮೇಲೆ ಒತ್ತಡ ಹೇರಿ ಆರಂಭಿಸಿದ ವಿಶೇಷ ರೈಲು ಸೇವೆಗಳನ್ನು ಈಗ ಮೇ 2026 ರಿಂದ ಭಾರತೀಯ ರೈಲ್ವೆ ಶಾಶ್ವತ ಆಧಾರದ ಮೇಲೆ ನಿಯಮಿತ ಸಂಚಾರಕ್ಕೆ ಅನುಮತಿ ನೀಡಿರುವುದು ಸಂತಸದ ಸಂಗತಿ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದ್ದಾರೆ.
ಕೇಂದ್ರ ರೈಲು ಇಲಾಖೆಯ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಜೊತೆ ವಿಶೇಷ ರೈಲುಗಳನ್ನು ಕಾಯಂ ಆಗಿ ಸಂಚಾರ ಮಾಡಲು ಒತ್ತಡ ಹೇರಿದ ಪರಿಣಾಮವಾಗಿ ಇದೀಗ ಒಪ್ಪಿಗೆ ದೊರೆತಿದ್ದು ಬೆಂಗಳೂರು, ಕಲಬುರಗಿ, ಬೀದರ್ ಮಧ್ಯೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಮೋದಿ ಸರ್ಕಾರವು ದೊಡ್ಡ ಕೊಡುಗೆಯನ್ನು ನೀಡಿದೆ.
ಈ ಭಾಗದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ಬೇಡಿಕೆ ಒಡ್ಡಿ ಮನವಿ ಸಲ್ಲಿಸಿದಾಗ ಈ ವಿಶೇಷ ರೈಲುಗಳನ್ನು ಸಂಚಾರಕ್ಕೆ ಇಲಾಖೆ ಅನುಮತಿ ನೀಡಿತ್ತು. ವಂದೇ ಭಾರತ್ ರೈಲು ಸೇವೆ ಆರಂಭವಾದಾಗ ತಾತ್ಕಾಲಿಕ ಅವಧಿಗೆ ಪರವಾನಿಗೆ ಇದ್ದ ವಿಶೇಷ ರೈಲು ಸಂಚಾರ ಈಗ ನಿಯಮಿತಗೊಳಿಸಲಾಗಿದೆ. ರೈಲು ಸಂಖ್ಯೆ 06539/06540 ಎಸ್ಎಂವಿಬಿ ಬೆಂಗಳೂರು - ಕಲಬುರಗಿ ವಾರಕ್ಕೆ ಮೂರು ಬಾರಿ ಸಂಚರಿಸುತ್ತಿದ್ದ ವಿಶೇಷ ಎಕ್ಸ್ಪ್ರೆಸ್ ಅನ್ನು ಫ್ಲ್ಯಾಗ್ ಆಫ್ ಮಾಡಿದಾಗ ಪ್ರಯಾಣವು ಮಾರ್ಚ್ 9, 2024 ರಂದು ಆರಂಭಗೊಂಡಿತ್ತು. ನಂತರ ಸಾರ್ವಜನಿಕರ ಭಾರೀ ಬೇಡಿಕೆಯಿಂದಾಗಿ ಇದನ್ನು ಬೀದರ್ ವರೆಗೆ ವಿಸ್ತರಿಸಲಾಯಿತು. ಮತ್ತೊಂದು ವಿಶೇಷ ಸೇವೆ 06207/08 ಬೆಂಗಳೂರು ಕಂಟೋನ್ಮೆಂಟ್ - ಕಲಬುರಗಿ ಸಾಪ್ತಾಹಿಕ ಎಕ್ಸ್ಪ್ರೆಸ್ ಅನ್ನು ನಂತರ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು.
ಈಗ ಎರಡೂ ರೈಲು ಸೇವೆಗಳನ್ನು ಹೊಸ ರೈಲು ಸಂಖ್ಯೆಗಳೊಂದಿಗೆ ಕ್ರಮಬದ್ಧಗೊಳಿಸಲಾಗಿದೆ.16559/
16560 ಎಸ್ ಎಮ್ ವಿಬಿ ಬೆಂಗಳೂರು - ಬೀದರ್ ತನಕ ವಾರಕ್ಕೆ ಎರಡು ಸಲ ಸಂಚರಿಸುವ ಎಕ್ಸ್ಪ್ರೆಸ್
ಎಸ್ ಎಂವಿಬಿ ಬೆಂಗಳೂರಿನಿಂದ ಮೇ 15, 2026 ಮತ್ತು ಬೀದರ್ನಿಂದ ಮೇ 16, 2026 ರಿಂದ ನಿಯಮಿತಗೊಳಿಸಲಾಗಿದೆ.16563/16564 ಬೆಂಗಳೂರು ಕಂಟೋನ್ಮೆಂಟ್ - ಕಲಬುರಗಿ ಸಾಪ್ತಾಹಿಕ ಎಕ್ಸ್ಪ್ರೆಸ್
ಬೆಂಗಳೂರು ಕಂಟೋನ್ಮೆಂಟ್ನಿಂದ ಮೇ 16, 2026 ರಿಂದ ಮತ್ತು ಕಲಬುರಗಿಯಿಂದ ಮೇ 17, 2026 ರಿಂದ ನಿಯಮಿತಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ರೈಲು ಪ್ರಯಾಣಿಕರ ಪ್ರಯಾಣ ಸಮಸ್ಯೆಗೆ ಪರಿಹಾರ ರೂಪವಾಗಿ ರೈಲು ಸೇವೆ ಲಭ್ಯವಾಗಲಿದೆ.ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರೈಲ್ವೆ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವರಾದ ವಿ. ಸೋಮಣ್ಣ ಅವರ ಮೇಲೆ ನಿರಂತರ ಒತ್ತಡ ಹಾಕಿದ್ದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಲಾಖೆಯು ದೊಡ್ಡ ಕೊಡುಗೆಯನ್ನು ನೀಡಿರುವುದಕ್ಕೆ ಅಭಿನಂದನೆಗಳು ಎಂದು ಡಾ.ಉಮೇಶ್ ಜಾಧವ್ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
