ಕಾಯಕ ಮತ್ತು ದಾಸೋಹ ಸಾಮಾಜಿಕ ಕಲ್ಯಾಣದ ಕೈಗನ್ನಡಿ - ಶಿವಣ್ಣ ಇಜೇರಿ
ಕಾಯಕ ಮತ್ತು ದಾಸೋಹ ಸಾಮಾಜಿಕ ಕಲ್ಯಾಣದ ಕೈಗನ್ನಡಿ - ಶಿವಣ್ಣ ಇಜೇರಿ
ಶಹಪುರ : ಸಾಮಾಜಿಕ ಕಲ್ಯಾಣದ ಕೈಗನ್ನಡಿಯಂತೆ,ಬಸವಣ್ಣ ಸಾರಿದ ಕಾಯಕ ಮತ್ತು ದಾಸೋಹ ತತ್ವಗಳು ಸಮಾನತೆ ಹಾಗೂ ಶ್ರಮದ ಸಂಕೇತಗಳಾಗಿವೆ ಎಂದು ಹಿರಿಯ ಶರಣ ಸಾಹಿತಿ ಶಿವಣ್ಣ ಇಜೇರಿ ಹೇಳಿದರು.
ಶಹಾಪುರ ಪಟ್ಟಣದ ಶಿರವಾಳ ರಸ್ತೆಯಲ್ಲಿರುವ ಎಸ್.ಎಂ.ಸಿ.ಜೈನ್ ಬಿ.ಎಡ್.ಕಾಲೇಜಿನಲ್ಲಿ ಬೆಂಗಳೂರಿನ ಮಹಾಶೈವ ಪ್ರಕಾಶನ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಖ್ಯಾತ ಸಾಹಿತಿಗಳು ಹಾಗೂ ಸಾಂಸ್ಕೃತಿಕ ಚಿಂತಕರು ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ರಚಿಸಿದ "ಮುಕ್ಕಣ್ಣ ಕಂಡ ಬಸವಣ್ಣ" ಎಂಬ ಕೃತಿಯ ಕುರಿತು ಮಾತನಾಡಿದರು.ಯಾವುದೇ ಕೆಲಸ ಕೀಳಲ್ಲ ಮೇಲಲ್ಲ ಎಲ್ಲಾ ಕಾಯಕಗಳು ಸಮಾನವಾಗಿವೆ ಎಂದು ನುಡಿದರು.
ಹಿರಿಯ ಮುಖಂಡ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ,ಮುಕ್ಕಣ್ಣ ಕರಿಗಾರರ ಈ ಕೃತಿಯಲ್ಲಿ ಬಸವಣ್ಣನವರ ವೈಚಾರಿಕ ಚಿಂತನೆಗಳ,ನಿಲುವುಗಳ ಕುರಿತು ಅವರ ಅನುಭವದ ಆಧಾರದ ಮೇಲೆ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ ಆದರೆ ಇಂದಿನ ಯುವ ಸಮೂಹ ವಚನ ಸಾಹಿತ್ಯವನ್ನು ಓದಿ ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ: ಸಿದ್ದರಾಮ ಹೊನಕಲ್ ಮಾತನಾಡಿ ಸಕಲ ಜೀವಿಗಳಿಗೆ ಲೇಸನ್ನೆ ಬಯಸುವ ತತ್ವಗಳ ಮೂಲಕ ಅವರು ಮಾನವೀಯ ಸಮಾನತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಪ್ರತಿಪಾದಿಸಿದ ಪರಿ ಎಳೆಯಾಗಿ ಈ ಕೃತಿಯಲ್ಲಿ ಮುಕ್ಕಣ್ಣ ಕರಿಗಾರರವರು ಈ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ.ಇಂತಹ ಸಾಂಸ್ಕೃತಿಕ ಹಾಗೂ ವೈಚಾರಿಕತೆ ಚಿಂತಕರ ಕೃತಿಗಳು ಹೆಚ್ಚೆಚ್ಚು ಈ ನಾಡಿಗೆ ನೀಡಲಿ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶಬಾನ ಎಸ್.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಈ ಸಮಾರಂಭದ ವೇದಿಕೆಯ ಮೇಲೆ ಹಿರಿಯ ಪತ್ರಕರ್ತರಾದ ನಾರಾಯಣಚಾರ್ ಸಗರ,ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ, ಅಶೋಕ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕುಮಾರಿ ಸಂಗೀತ ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆ ಹಾಡಿದರು,ಮೇಘ ಸ್ವಾಗತಿಸಿದರು, ಸಾಬಣ್ಣ ಯಾದವ್ ನಿರೂಪಿಸಿದರು,ಉಮೇಶ್ ಜಾದವ್ ವಂದಿಸಿದರು.
