ಬೆಳಗಾವಿ ಅಧಿವೇಶನದಲ್ಲಿ ಅತೀವೃಷ್ಠಿ ಕುರಿತು ಶಾಸಕ ಪ್ರಭು ಚವ್ಹಾಣ ಪ್ರಶ್ನೆ

ಬೆಳಗಾವಿ ಅಧಿವೇಶನದಲ್ಲಿ ಅತೀವೃಷ್ಠಿ ಕುರಿತು ಶಾಸಕ ಪ್ರಭು ಚವ್ಹಾಣ ಪ್ರಶ್ನೆ

ಬೆಳಗಾವಿ ಅಧಿವೇಶನದಲ್ಲಿ ಅತೀವೃಷ್ಠಿ ಕುರಿತು ಶಾಸಕ ಪ್ರಭು ಚವ್ಹಾಣ ಪ್ರಶ್ನೆ

 *ಹಾನಿಯಾದ ರಸ್ತೆ, ಸೇತುವೆಗಳ ದುರಸ್ಥಿಗೆ ಕಡಿಮೆ ಅನುದಾನ ನೀಡಿದಕ್ಕೆ ಬೇಸರ*

ಕಮಲನಗರ:ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಯಿಂದ ಹಾನಿಯಾಗಿರುವ ಔರಾದ(ಬಿ) ಮತಕ್ಷೇತ್ರದ ರಸ್ತೆ, ಸೇತುವೆಗಳ ದುರಸ್ಥಿಗೆ 29.34 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು‌ ನೀಡಿದ ಮಾಹಿತಿಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ ಸಚಿವರು, ಔರಾದ(ಬಿ) ಮತಕ್ಷೇತ್ರದಲ್ಲಿ ಭಾರಿ ಮಳೆಯಿಂದ ಕೆಲವು ರಸ್ತೆಗಳು ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 2025-26ನೇ ಸಾಲಿನ ಮುಖ್ಯಮಂತ್ರಿಗಳ ಅನುದಾನದಡಿ 39.13 ಲಕ್ಷ ಮಂಜೂರು ಮಾಡಿದ್ದು, 29.34 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

ಪ್ರಗತಿ ಪಥ ಯೋಜನೆಯಡಿ ಔರಾದ(ಬಾ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 22 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು 16.04 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ. ಆರ್ಥಿಕ ಇಲಾಖೆಯು ಕಾಲ ಕಾಲಕ್ಕೆ ಒದಗಿಸುತ್ತಿರುವ ಅನುದಾನದ ಮಿತಿಯೊಳಗೆ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಉತ್ತರಿಸಿದ್ದಾರೆ.

ಈ ಉತ್ತರದಿಂದ ನಿರಾಶರಾಗಿರುವ ಶಾಸಕರು, ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಹಾನಿ ಸಂಭವಿಸಿದ್ದು, ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ರಸ್ತೆಗಳನ್ನು ದುರಸ್ತಿ ಮಾಡಿಕೊಡುವಂತೆ ಅನೇಕ ಸಲ ಮುಖ್ಯಮಂತ್ರಿಗಳು, ಸಚಿವರನ್ನು ಭೇಟಿಯಾಗಿದ್ದೇನೆ. 

ಈ ವರ್ಷ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತಿ ಹೆಚ್ಚಿನ ಹಾನಿ ಔರಾದ(ಬಿ) ಕ್ಷೇತ್ರದಲ್ಲಿ ಉಂಟಾಗಿದೆ. ಎಲ್ಲ ಭಾಗಗಳಲ್ಲಿ ರಸ್ತೆ, ಸೇತುವೆ, ಕೆರೆ-ಕಟ್ಟೆಗಳು ಒಡೆದಿವೆ. ಜನ-ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಶಾಲೆ, ಅಂಗನವಾಡಿ ಸೇರಿದಂತೆ ಅನೇಕ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೀಡಾಗಿದ್ದು, ನೂರಾರು ಕೋಟಿ ನಷ್ಟವಾಗಿದೆ. ಆದರೆ ಸಂಕಷ್ಟದಲ್ಲಿರುವ ಜನತೆಗೆ ನೆರವಾಗಬೇಕಾದ ಸರ್ಕಾರ ಅತ್ಯಲ್ಪ ಪ್ರಮಾಣದ ಅನುದಾನ ನೀಡುವ ಮೂಲಕ ಜನ ವಿರೋಧಿಯಂತೆ ನಡೆದುಕೊಂಡಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಅತೀವೃಷ್ಠಿಯಿಂದ ಹಾನಿಯಾಗಿರುವ ಎಲ್ಲ ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಸೇರಿದಂತೆ ಸರ್ಕಾರಿ ಕಛೇರಿಗಳನ್ನು ದುರಸ್ತಿಗೊಳಿಸಲು ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರವನ್ನು ಒತ್ತಾಯಿದ್ದೆ. ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದ್ದು, ನೊಂದವರ ಧ್ವನಿ ಕೇಳಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಸರ್ಕಾರ ಕೂಡಲೇ ಅತೀವೃಷ್ಠಿ ಪೀಡಿತ ಪ್ರದೇಶಗಳಲ್ಲಿ ಹಾನಿಯಾಗಿರುವ ಎಲ್ಲ ರಸ್ತೆ, ಸೇತುವೆ, ಸಾರ್ವಜನಿಕ ಆಸ್ತಿಪಾಸ್ತಿಯ ದುರಸ್ತಿಗೆ ಮುಂದಾಗಬೇಕು. ಇದಕ್ಕಾಗಿ ಹೆಚ್ಚಿನ ಅನುದಾನ ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದು ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.