ಮಂಗಳೂರು ವಿವಿಗೆ ನಾರಾಯಣ ಗುರು ಹೆಸರು ಘೋಷಣೆ ಡಾ. ಪ್ರಣವಾನಂದ ಶ್ರೀ ಸಿಎಂ ಗೆ ಮನವಿ

ಮಂಗಳೂರು ವಿವಿಗೆ ನಾರಾಯಣ ಗುರು ಹೆಸರು ಘೋಷಣೆ ಡಾ. ಪ್ರಣವಾನಂದ ಶ್ರೀ ಸಿಎಂ ಗೆ ಮನವಿ

ಕಲ್ಯಾಣ ಕರ್ನಾಟಕ ಈಡಿಗ ಮುಖಂಡರ ಸಭೆಯಲ್ಲಿ ನಿರ್ಣಯ

ಮಂಗಳೂರು ವಿವಿಗೆ ನಾರಾಯಣ ಗುರು ಹೆಸರು ಘೋಷಣೆ ಡಾ. ಪ್ರಣವಾನಂದ ಶ್ರೀ ಸಿಎಂ ಗೆ ಮನವಿ

ಕಲಬುರಗಿ : ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಂತರ ಮತ್ತು ಮಹಾನ್ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವುದರಿಂದ ಅದರಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಘೋಷಣೆ ಮಾಡಬೇಕು ಎಂದು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

    ಕಲಬುರಗಿಯ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ಭಾನುವಾರ (ನವಂಬರ್ 2ರಂದು) ನಡೆದ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಮುಖಂಡರ ಸಭೆಯಲ್ಲಿ ಡಾಕ್ಟರ್ ಪ್ರಣವಾನಂದ ಶ್ರೀಗಳು ಕೈಗೊಳ್ಳುವ ಪಾದಯಾತ್ರೆಯ ಬೇಡಿಕೆ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದ ಹರಿಕಾರರೆಂದು ಹೆಸರಾಗಿರುವ ವಿಶ್ವಗುರು ಬಸವಣ್ಣ, ಶೂದ್ರ ಸಿದ್ಧಾಂತದ ಹರಿಕಾರ ಕನಕದಾಸರು,

ಹಿಂದುಳಿದ ಸಮುದಾಯಗಳಿಗೆ ಚೈತನ್ಯ ನೀಡಿದ,ರಾಜ್ಯದ ಅಭಿವೃದ್ಧಿಗೆ ಚಲನಶೀಲತೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ. ದೇವರಾಜ ಅರಸು ಮುಂತಾದ ಮಹನೀಯರ ಹೆಸರನ್ನು ವಿವಿಧ ವಿಶ್ವವಿದ್ಯಾಲಯಗಳಿಗೆ ನಾಮಕರಣ ಮಾಡುವ ಮುಖ್ಯಮಂತ್ರಿಗಳ ಪ್ರಸ್ತಾಪಕ್ಕೆ ಗೌರವ ಪೂರ್ವಕವಾಗಿ ಸ್ವಾಗತ ಕೋರುತ್ತೇನೆ. ಹಾಗೆ " ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು " ಎಂಬ ವಿಶ್ವ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲು ಮುಖ್ಯ ಕಾರ್ಯದರ್ಶಿಗಳು ಮುಂದಿನ ಸಚಿವ ಸಂಪುಟ ಸಭೆಗೆ ಮಂಡಿಸುವ ಪ್ರಸ್ತಾಪದಲ್ಲಿ ಸೇರಿಸಿಕೊಳ್ಳಬೇಕು. ನಾರಾಯಣ ಗುರುಗಳು ಕರ್ನಾಟಕಕ್ಕೆ ಭೇಟಿ ನೀಡಿದ ಏಕೈಕ ಸ್ಥಳ ಮಂಗಳೂರು ಆಗಿದ್ದು 1908 ರಿಂದ 1912 ರ ಮಧ್ಯೆ ಮೂರು ಸಲ ಮಂಗಳೂರಿಗೆ ಭೇಟಿ ನೀಡಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಪ್ರತಿಷ್ಠಾಪನೆ ಮಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಏಷ್ಯಾದಲ್ಲೆ ಮೊಟ್ಟ ಮೊದಲ ಬಾರಿಗೆ ಶಿವಗಿರಿಯಲ್ಲಿ ಸರ್ವಧರ್ಮ ಸಮ್ಮೇಳನ ನಡೆಸಿ ನೂರು ವರ್ಷ ಸಂದಿದೆ.ಮಹಾತ್ಮಾ ಗಾಂಧೀಜಿ ಮತ್ತು ನಾರಾಯಣ ಗುರುಗಳು ಶಿವಗಿರಿಯಲ್ಲಿ ಭೇಟಿಯಾಗಿ ಈ ವರ್ಷಕ್ಕೆ ನೂರು ವರ್ಷ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ಕಾರ್ಯಕ್ರಮದ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಈಗಾಗಲೇ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಶಿವಗಿರಿಯಲ್ಲಿ ಚಾಲನೆ ನೀಡಿರುವುದರಿಂದ ಇಂತಹ ಮಹಾನ್ ಸಂಗತಿಗಳ ಮಹತ್ವದ ವರ್ಷದಲ್ಲಿ ಕರ್ನಾಟಕದಲ್ಲಿ ಗುರುಗಳ ಹೆಸರಿನಲ್ಲಿ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವುದು ಅತ್ಯಂತ ಸೂಕ್ತ ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

     ಮುಂದಿನ ವರ್ಷ ಜನವರಿ 6ರಿಂದ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದಿಂದ 41 ದಿನಗಳ ವರೆಗೆ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ನಡೆಸುವ 700 ಕಿಲೋಮೀಟರ್ ಪಾದಯಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ. ಜನವರಿ 6 ರಿಂದ ಪ್ರತಿ ದಿನ 20 ಕಿ.ಮೀ ಪಾದಯಾತ್ರೆ ನಡೆಸಿ ಚಿತ್ತಾಪುರ,ವಾಡಿ, ಶಹಬಾದ್, ಜೇವರ್ಗಿ, ಶಹಾಪುರ, ದೇವದುರ್ಗ, ಸಿರವಾರ, ಮಾನವಿ, ಸಿಂಧನೂರು, ಕಾರಟಗಿ, ಗಂಗಾವತಿ, ಹೊಸಪೇಟೆ ಚಿತ್ರದುರ್ಗ ಮಾರ್ಗ ಮೂಲಕ ಪಾದಯಾತ್ರೆ ಕೈಗೊಳ್ಳಲಾಗುವುದು. ಕಾರ್ಯಕ್ರಮದಲ್ಲಿ ಉಪೇಂದ್ರ ಗುತ್ತೇದಾರ್ ನಾಗುರಾಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್, ಶಕ್ತಿ ಪೀಠದ ಟ್ರಸ್ಟಿ ವೆಂಕಟೇಶ ಗುಂಡಾನೂರ, ರಾಜೇಶ್ ಡಿ ಗುತ್ತೇದಾರ್, ಸುರೇಶ್ ಗುತ್ತೇದಾರ್ ಕರದಾಳ್, ಶಂಕರ್ ಲೀಡರ್, ಅಂಬಯ್ಯ ಗುತ್ತದಾರ, ಇಬ್ರಾಹಿಂಪೂರ, ಸುರೇಶ್ ಗುತ್ತೇದಾರ್ ಮಟ್ಟೂರ್, ಶಿವರಾಜ್ ಗುತ್ತೇದಾರ್ ಜೇವರ್ಗಿ, ಮಲ್ಲಯ್ಯ ಗುತ್ತೇದಾರ್, ಬಸಯ್ಯ ಗುತ್ತೇದಾರ್ ತೆಲ್ಲೂರ, ರಾಮಕೃಷ್ಣ ಅಶೋಕ್ ಗುತ್ತೇದಾರ್ ರಾಯಚೂರ, ಮಹೇಶ್ ಗೌಡ ಮತ್ತಿ ತರ ಪಾಲ್ಗೊಂಡಿದ್ದರು. ಸಮುದಾಯದ ಅಭಿವೃದ್ಧಿಗಾಗಿ 16 ಬೇಡಿಕೆಗಳನ್ನು ಮಂಡಿಸಲಾಗುವುದು. ಎರಡುವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರವು ಸಮುದಾಯಕ್ಕಾಗಿ ಯಾವುದೇ ಅನುಕೂಲತೆಗಳನ್ನು ಮಾಡಿಕೊಡಲಿಲ್ಲ. ಜೊತೆಗೆ ಸಮುದಾಯದ ಮುಖಂಡರ ಒಂದು ನಿಯೋಗವನ್ನು ಕೂಡ ಸಿಎಂ ಬಳಿಗೆ ಕರೆದೊಯ್ಯಲು ಈ ವರೆಗೆ ಸಾಧ್ಯವಾಗಲಿಲ್ಲ. ಆದುದರಿಂದ 16 ಬೇಡಿಕೆಗಳ ಜೊತೆಗೆ ಸಮುದಾಯವನ್ನು ಕಡೆಗಣಿಸುವ ವಿರುದ್ಧ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಪಾದಯಾತ್ರೆಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುವ ನಾರಾಯಣ ಗುರುಗಳ ಪ್ರತಿಮೆಯನ್ನು ಹೊಂದಿದ ವಿಶೇಷ ರಥ, ಎರಡು ಅಲಂಕೃತ ವಾಹನಗಳು ಇನ್ನೊಂದು ಲಗೇಜ್ ವಾಹನ ಮತ್ತು ಪಾದಯಾತ್ರೆಯಲ್ಲಿ ಸ್ವಾಮೀಜಿಯವರೊಂದಿಗೆ ಕನಿಷ್ಠ ನೂರು ಜನ ನಿತ್ಯ ಪಾಲ್ಗೊಳ್ಳಲು ನಿರ್ಧರಿಸಲಾಯಿತು. ಸಮುದಾಯದ ಬೇಡಿಕೆಗಳಿಗೆ ಈ ಸರಕಾರವು ಸ್ಪಂದನೆ ನೀಡಿ ಸ್ವಾಮೀಜಿಯವರು ಹಾಗೂ ಮುಖಂಡರ ಜೊತೆ ಚರ್ಚೆ ನಡೆಸಿ ಲಿಖಿತವಾಗಿ ಆಶ್ವಾಸನೆ ನೀಡಿದರೆ ಮಾತ್ರ ಪಾದಯಾತ್ರೆಯನ್ನು ಮುಂದುವರಿಸುವ ಬಗ್ಗೆ ಮರುಚಿಂತನೆ ಮಾಡಲಾಗುವುದು. ಇಲ್ಲವಾದರೆ ನಿರ್ಧರಿಸಿದಂತೆ ಪಾದಯಾತ್ರೆ ಮುಂದುವರಿಯಲಿದೆ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. 

   ಮುಂದಿನ ವರ್ಷ ಜನವರಿ 6ರಂದು ಕೇಂದ್ರ ಸಚಿವರಾದ ಶ್ರೀಪಾದ ನಾಯಕ್ ಪಾದಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಸರ್ವ ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ಯಶಸ್ವಿಗಾಗಿ ಬೀದರ್ ಏಳು ತಾಲೂಕು, ಕಲಬುರಗಿ 10, ರಾಯಚೂರು, ಯಾದಗಿರಿ 7, ಯಾದಗಿರಿ 5, ಮತ್ತು ವಿಜಯಪುರದ 14 ತಾಲ್ಲೂಕು ಸೇರಿದಂತೆ ವಿವಿಧಡೆ ಪೂರ್ವ ಸಿದ್ಧತಾ ಸಭೆಗಳನ್ನು ಕೂಡ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.