ಕಮಲನಗರ ಪ್ರಜಾಸೌಧ ಸ್ಥಳಕ್ಕೆ ಶಾಸಕ ಪ್ರಭು ಚವ್ಹಾಣ ಭೇಟಿ

ಕಮಲನಗರ ಪ್ರಜಾಸೌಧ ಸ್ಥಳಕ್ಕೆ ಶಾಸಕ ಪ್ರಭು ಚವ್ಹಾಣ ಭೇಟಿ

ಕಮಲನಗರ ಪ್ರಜಾಸೌಧ ಸ್ಥಳಕ್ಕೆ ಶಾಸಕ ಪ್ರಭು ಚವ್ಹಾಣ ಭೇಟಿ

ಕಮಲನಗರ ತಾಲೂಕಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ "ಪ್ರಜಾ ಸೌಧ" ತಾಲ್ಲೂಕು ಆಡಳಿತ ಕೇಂದ್ರದ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅ.26ರಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಶಾಸಕರು ಅಧಿಕಾರಿಗಳಿಂದ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು. ತಹಸೀಲ್ದಾರರಾದ ಅಮಿತಕುಮಾರ ಕುಲಕರ್ಣಿ, ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಶಿಕಾಂತ ಅವರು ಪ್ರಜಾಸೌಧ ಕಾಮಗಾರಿಯ ಕುರಿತು ವಿವರಣೆ ನೀಡಿದರು.

ಕಮಲನಗರ ಹೊಸ ತಾಲ್ಲೂಕು ಕೇಂದ್ರವಾದ ನಂತರ ಎಲ್ಲ ಇಲಾಖೆಗಳು ಕಾರ್ಯಾರಂಭ ಮಾಡುವ ದಿಶೆಯಲ್ಲಿ ನಿರಂತರ ಶ್ರಮಿಸುತ್ತಿದ್ದೇನೆ. ತಾಲ್ಲೂಕು ಆಡಳಿತ ಜನರ ನಿಕಟ ಇಲಾಖೆಯಾಗಿರುವುದರಿಂದ ತಾಲ್ಲೂಕು ಆಡಳಿಯ ಕೇಂದ್ರ ನಿರ್ಮಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಸರ್ಕಾರಕ್ಕೆ ನಿರಂತರವಾಗಿ ಮನವರಿಕೆ ಮಾಡುತ್ತಾ ಬಂದಿದ್ದೇನೆ. ಅನೇಕ ಸಲ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದೇನೆ ಎಂದರು.

ನನ್ನ ನಿರಂತರ ಪ್ರಯತ್ನಗಳಿಂದಾಗಿ ಸರ್ಕಾರವು ಕಮಲನಗರದಲ್ಲಿ ನೂತನ "ಪ್ರಜಾಸೌಧ" ತಾಲ್ಲೂಕು ಆಡಳಿತ ಕೇಂದ್ರದ ಯೋಜನೆಗೆ ಅನುಮೋದನೆ ನೀಡಿದೆ. ಎರಡು ಅಂತಸ್ಥಿನ ಬೃಹತ್ ಕಟ್ಟಡ ನಿರ್ಮಾಣಕ್ಕಾಗಿ 15 ಕೋಟಿ ಒದಗಿಸಬೇಕೆಂದು ಬೇಡಿಕೆ ಸಲ್ಲಿಸಿದ್ದೆ. ಆದರೆ ಸರ್ಕಾರ 8.60 ಕೋಟಿಗೆ ಮಂಜೂರಾತಿ ನೀಡಿದೆ. ನಿವೇಶನದ ಸಮಸ್ಯೆಯಿತ್ತು. ರಾಜಕುಮಾರ ಪೊಲೀಸ್ ಪಾಟೀಲ 2.5 ಎಕರೆ ಜಮೀನು ದಾನವಾಗಿ ನೀಡಿದ್ದರಿಂದ ನಿವೇಶನ ಸಮಸ್ಯೆ ಕೊನೆಗೊಂಡು ಕಟ್ಟಡ ಕೆಲಸ ಸುಗಮವಾಗಿ ನಡೆಯಲು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು.

ಕರ್ನಾಟಕ ಗೃಹ ಮಂಡಳಿಯಿಂದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಉಪ ಗುತ್ತಿಗೆ ನೀಡುವುದಾಗಲಿ, ಅನ್ಯರಿಗೆ ಕೆಲಸ ವಹಿಸುವುದಾಗಲಿ ಮಾಡದೇ ಮೂಲ ಗುತ್ತಿಗೆದಾರರಿಂದ ಕೆಲಸ‌ ಮಾಡಿಸಬೇಕು. ಅಂದಾಜು ಪಟ್ಟಿಯಲ್ಲಿ ಇರುವಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ಅನುಷ್ಠಾನದಲ್ಲಿ ಲೋಪವಾದರೆ ನಾನು ಸುಮ್ಮನೆ ಬಿಡುವುದಿಲ್ಲವೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಪ್ರಜಾಸೌಧಕ್ಕೆ ಹೋಗುವ ರಸ್ತೆ ಹಾಗೂ ಇನ್ನಿತರೆ ಅವಶ್ಯಕ ಕೆಲಸಗಳನ್ನು ಆದ್ಯತೆಗೆ ಅನುಗುಣವಾಗಿ ಮಾಡಿಸಬೇಕು. ಅವಶ್ಯಕತೆಯಿದ್ದಲ್ಲಿ ಅನುದಾನ ಒದಗಿಸುತ್ತೇನೆ. ಕಾಮಗಾರಿ ಗುಣಮಟ್ಟದಿಂದ ಮಾಡಬೇಕು. ಈ ದಿಶೆಯಲ್ಲಿ ತಹಸೀಲ್ದಾರರು ಕೂಡ ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು

28ರಂದು ಭೂಮಿ ಪೂಜೆ: ನೂತನ ಪ್ರಜಾಸೌಧ ತಾಲ್ಲೂಕು ಆಡಳಿತ ಕೇಂದ್ರಕ್ಕೆ ಅ.28ರ ಬೆಳಗ್ಗೆ 11 ಗಂಟೆಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಆಗಮಿಸುತ್ತಿದ್ದಾರೆ. ಕಮಲನಗರದ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಾಸಕರಾದ ಪ್ರಭು ಚವ್ಹಾಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾವ ಕೌಟಗೆ, ಮುಖಂಡರಾದ ಬಸವರಾಜ ಪಾಟೀಲ, ಶಿವಾನಂದ ವಡ್ಡೆ, ಶಿವು ಝುಲ್ಫೆ, ನಾಗೇಶ ಪತ್ರೆ, ಕಿರಣ ಪಾಟೀಲ, ರಂಗಾರಾವ ಜಾಧವ, ರಾಜಕುಮಾರ ಗಾಯಕವಾಡ, ರಾಜು ಅಲಬಿದೆ, ಬಂಟಿ ರಾಂಪೂರೆ, ಜಾಖೇರ್ ಶೇಖ್ಸೇ ಸೇರಿದಂತೆ ಇತರರಿದ್ದರು.