ರೇಚವ್ವೆ (ಶರಣ ಕಾಟಕೂಟಯ್ಯಗಳ ಪುಣ್ಯಸ್ತ್ರೀ)

ಬಂಜೆಯಾವಿಂಗೆ ಕ್ಷೀರವುಂಟೆ ?
ವ್ರತ ಹೀನನ ಬೆರೆಯಲುಂಟೆ ?
ನೀ ಬೆರೆದಡೂ ಬೆರೆ;
ನಾನೊಲ್ಲೆ ನಿಜ ಶಾಂತೇಶ್ವರಾ.
** *ಶರಣೆ #ರೇಚವ್ವೆ*
(ಶರಣ ಕಾಟಕೂಟಯ್ಯಗಳ ಪುಣ್ಯಸ್ತ್ರೀ)
**
*ವಚನ ಅನುಸಂಧಾನ*
ಶರಣತತ್ವ ಸಿದ್ಧಾಂತಗಳು; ಅರಿವುಗೊಂಡಂಥಾ ಮನಕ್ಕೆ ಅವು ಮಹಾ ಪ್ರಸಾದಗಳು. ಅವುಗಳನ್ನ ಎಷ್ಟು ಚೆನ್ನಾಗಿ ಸ್ವೀಕರಿಸಿ, ತಿಳಿದು ಆಚರಿಸಿ ನಡೆ ದರೂ ಆ ತತ್ವಸಿದ್ಧಾಂತಗಳ ಒಳಗಿನ ಅನುಪಮ ಬೆಳಗಿನ ಬಗೆಗಿನ ಅಗಾಧ ಪ್ರೀತಿ ಗೌರವದ ಸೆಳೆತ ಖಂಡಿತಾ ಎಂದಿಗೂ ಕಡಿಮೆ ಆಗದು. ಎಂಥವರ
ಹೃನ್ಮನಗಳೂ ಒಮ್ಮೆ ಶರಣತತ್ವ ಸಿದ್ಧಾಂತಗಳ ಆ ಆಪ್ತ ಸೆಳವಿಗೆ ಸಿಕ್ಕರೆ ಮುಗಿಯಿತು! ತನುಮನದ ಒಳ ಹೊರಗಿನ ಗಾಢ ಅಜ್ಞಾನ ಅಂಧಃಕಾರಗಳು ಕರಗಿ ಒಳಹೊರಗೆಲ್ಲಾ ಬಯಲು ಬೆಳಗಿನ ಬೆಳೆ ಯ ಸಿರಿ ಬೆಳಕು ನಳನಳಿಸಿದಂತೆಲ್ಲಾ ಹಾಲ್ಚೆಲ್ಲಿ ದಂಥಾ ಆ ಬೆಳದಿಂಗಳ ಅನುಭೂತಿ ತಂಪೆರೆಯು ತ್ತದೆ!! ಇಂತಹ ಪರಮಾನಂದದಾಯಕರ ಪರಿಸರ ವನ್ನು ಕಲ್ಯಾಣದ ಅಂಗಳದಲ್ಲಿ ಅಪ್ಪಬಸವಣ್ಣನ ವರು ಕಲ್ಪಸಿದ್ದರು. ಹಾಗಾಗಿಯೇ ಆ ಅನುಭವ ಮಂಟಪವು; ಅಪ್ಪ ಬಸವಾದಿ ಶರಣರ ಅರಿವಿನ ತೊರೆಯಾಗಿ ಅನುಭಾವದ ಹೊಳೆಯಾಗಿ ವಚನ ಸಾಹಿತ್ಯದ ಬೆಳೆಯಾಗಿ ಬೆಳೆದು ಜಗದ ಹೃನ್ಮನವ ಸೆಳೆಯಿತು. ವಚನ ಸಾಹಿತ್ಯ ಬೆರಗಿನ ಬೆಟ್ಟವಾಗಿ ಬೆಳಗಿನ ಬಯಲಾಗಿ ಇಂದಿಗೂ ಜನಮಾನಸದ ಹೃನ್ಮನಗಳಲ್ಲಿ ಬೆಳಗಿ ಉಳಿದುಕೊಂಡಿದೆ. ಇಂಥಾ ಶರಣತತ್ವದ ಬಗೆಗಿನ ತನ್ನ ಅಪಾರ ಭಕ್ತಿ ಗೌರವ ಗಳನ್ನು ; ಇಲ್ಲಿ #ಶರಣೆ #ರೇಚವ್ವೆ (ಶರಣ ಕಾಟ ಕೂಟಯ್ಯಗಳ ಪುಣ್ಯಸ್ತ್ರೀ) ಈ ಮೇಲಿನ ಪ್ರಸ್ತುತ ವಚನದ ಕೆಲವೇ ಸಾಲಲ್ಲಿ ಅತ್ಯದ್ಭುತವಾಗಿಯೇ ಸೆರೆಹಿಡಿದಿದ್ದು, ಅದು ಅನನ್ಯವೂ ಅನಪಮವೂ ಆದ ವಚನವಾಗಿದೆ. ಅದನ್ನೀಗ ಅನುಸಂಧಾನ ಮಾಡಿ ಒಳಲೋಕದ ವಿಸ್ತಾರ ಕಾಣಲು ಪ್ರಯತ್ನ ಮಾಡಿ ನೋಡೋಣ.
*#ಬಂಜೆಯಾವಿಂಗೆ ಕ್ಷೀರವುಂಟೆ ?*
*ವ್ರತ ಹೀನನ #ಬೆರೆಯಲುಂಟೆ ?*
ಮೇಲಿನ ಪ್ರಾಸ್ತಾವಿಕವಾಗಿ ನಡೆಸಿದ ಮಾತುಗಳ ಬೆಳಕಿನಡಿಯಲ್ಲಿ ಈ ವಚನದ ನುಡಿಗಳ ಒಳಗಿನ ಆಶಯವನ್ನು ಅನುಸಂಧಾನ ಮಾಡು ಮೂಲಕ ಕಂಡುಕೊಳ್ಳುವುದು ಉಚಿತ ಎನಿಸುತ್ತದೆ. ವಚನ ಇಲ್ಲಿ ಎರಡು ಸರಳ ರೂಪಕದಲ್ಲಿ ತನ್ನ ಆಶಯವ ನ್ನು ತುಂಬಿಟ್ಟಿದೆ. ಒಂದು; ಬಂಜೆಯಾವಿಂಗೆ ಕ್ಷೀರ ವುಂಟೆ ? ಎನ್ನುವುದು. ಅಂದರೆ, ಬಂಜೆ ಆಕಳಿಗೆ ಹಾಲುಂಟೇ? ಅಂತೆಯೇ ವ್ರತ ಹೀನನಾದವನ ಜೊತೆಗೆ ಬೆರೆಯಲುಂಟೆ? ಎಂದು ಪ್ರಶ್ನಿಸುವುದರ
ಮೂಲಕ ತಾತ್ವಿಕ ಚಿಂತನೆಯ ಕುಡಿಗೆ ಕಿಡಿಯನ್ನು ಹಚ್ಚುತ್ತಾರೆ. ಅಂದ್ರೆ ಇಲ್ಲಿನ ತಾತ್ಪರ್ಯವೇನಂದ್ರೆ
ಶರಣತತ್ವಗಳನ್ನು ಅತ್ಯಂತ ನಿಷ್ಠರ ನಿಷ್ಠೆ ಬದ್ಧತೆ ಯಿಂದ ವ್ರತದಂತೆ ಅನುಸರಿಸಿ ಆಚರಿಸಿದಾಗ ಮಾತ್ರವೇ ಬಂಜೆ ಆಕಳು ಕರುಹಾಕಿ ಹಾಲನ್ನು ಕೊಟ್ಟಂತಾಗುತ್ತೆ ಅಂದ್ರೆ ವ್ರತವು ಫಲಪ್ರದವೇ ಆಗುತ್ತದೆ ಶರಣಸತಿ ಲಿಂಗಪತಿಯ ಸಮಾಗಮ ಕ್ರಿಯಾತ್ಮಕ ಸಂಬಂಧವಾದಾಗ ಮಾತ್ರವೇ ಅಲ್ಲಿ ಇಷ್ಟಲಿಂಗದ ಸಂಗಡ ಆ ನೋಟದ ಕೂಟವು ಸಾಧ್ಯವಾಗಿ ಫಲಿತವಾದಾಗ ಸುಫಲ ಆಗುತ್ತದೆ. ಇದನ್ನು ಸಾಧಕನು ವ್ರತನಿಷ್ಠೆಯಿಂದ ನಿರ್ವಹಿಸ ಬೇಕಾಗುತ್ತದೆ. ಹಾಗಾಗಿ ಇಲ್ಲಿ ವ್ರತಹೀನನಾದವ ಅಂದ್ರೆ ಇಲ್ಲಿ "ಚಂಚಲ ಚಿತ್ತ"ದ ಜೊತೆ ತಾನು ಭಕ್ತೆ ಯಾಗಿ ಬೆರೆಯಲು ಖಂಡಿತವಾಗಿಯೂ ಸಾಧ್ಯವಿ ಲ್ಲ ಎಂದು ವಚನಕಾರ್ತಿ ಸ್ಪಷ್ಟವಾಗಿ ಹೇಳುತ್ತಾರೆ.
*#ನೀ ಬೆರೆದಡೂ ಬೆರೆ; ನಾನೊಲ್ಲೆ*
*ನಿಜ #ಶಾಂತೇಶ್ವರಾ.*
ಇಲ್ಲಿ ಶರಣೆ ರೇಚವ್ವೆಯವರು ತಮ್ಮ ಇಷ್ಟಲಿಂಗ ಶಾಂತೇಶ್ವರಗೆ, ನೀ ಅಂತಹ ವ್ರತಹೀನ ಆದವನ ಅಂದ್ರೆ 'ಚಂಚಲಚಿತ್ತ'ವನ್ನ ತಾನು ಬೆರೆಯುವುದೇ ಇಲ್ಲ. ಬೇಕಾದ್ರೆ ನೀ ಬೆರೆ ನಾನು ಮಾತ್ರ ಖಂಡಿತಾ ಒಲ್ಲೆ! ಎಂದು ಇಲ್ಲಿ ಶರಣೆ ವಚನಕಾರ್ತಿ ರೇಚವ್ವೆ ಖಡಾಖಂಡಿತವಾಗಿಯೇ ಇಲ್ಲಿ ನಿರಾಕರಿಸುತ್ತಾರೆ. ತನ್ಮೂಲಕವಾಗಿ ಶರಣತತ್ವ ಸಿದ್ಧಾಂತಗಳ ಅರಿವು ಆಚರಣೆಯ ನಿಟ್ಟಿನಲ್ಲಿನ ಕ್ರಮಬದ್ಧತೆಯ ಬಿಗಿ ಬಂಧಗಳ ನಿಷ್ಠುರತೆಯನ್ನು ಓದುಗರ ಕಣ್ಮುಂದೆ ಹೂಬೇಹೂಬ ಕಟ್ಟಿ ನಿಲ್ಲಿಸುತ್ತಾರೆ. ಈ ರೀತಿಯ ಧೈರ್ಯ ಆ ಕಾಲದ ಮಹಿಳೆಯರಲ್ಲಿ ಮೂಡಲು ನಿಜಕ್ಕೂ ಕಾರಣವೆಂದರೆ ಅಪ್ಪ ಬಸವಣ್ಣನವರು ನೀಡಿದ ಪ್ರೋತ್ಸಾಹವೇ.
*#ಸಂಕ್ಷಿಪ್ತ #ಪರಿಚಯ*
(ಸಾಂದರ್ಭಿಕ ಚಿತ್ರ ಮಾಹಿತಿ ಅಂತರ್ಜಾಲ ಕೃಪೆ.)
ರೇಚವ್ವೆ; ಶರಣ ಕಾಟಕೂಟಯ್ಯಗಳ ಪುಣ್ಯಸ್ತ್ರೀ. ಶರಣರಾಗುವ ಪೂವ೯ದಲ್ಲಿ ವೀರ(ಕುರುಬ) ಗೊಲ್ಲಾಳರಿಗೆ 'ಕಾಟಕೂಟಯ್ಯ' ಎಂದು ಕರೆಯು ತ್ತಿದ್ದರಂತೆ. ಹಾಗಾಗಿ ಈ ರೇಚವ್ವೆ ವೀರ (ಕುರುಬ) ಗೊಲ್ಲಾಳ ಶರಣರ ಪುಣ್ಯಸ್ತ್ರೀಯಂದೇ ಹೇಳಲಾ ಗುತ್ತದೆ. ೧೨ನೇ ಶತಮಾನದ ಈ ದಂಪತಿಗಳದು
ಸಿಂದಗಿ ತಾಲೂಕಿನ ಗೋಲಗೇರಿ. ಕುರಿಗಳನ್ನು ಕಾಯುವ ಕಾಯಕದ ಕುರುಬರಿವರು. ಆಮೇಲೆ ಈ ದಂಪತಿಗಳು ಕಲ್ಯಾಣಕ್ಕೆ ಬಂದಿರ ಬೇಕೆಂದು ಅಭಿಪ್ರಾಯವಿದೆ. ಅನುಭವ ಮಂಟಪದ ೭೭೦ ಅಮರಗಣಂಗಳಲ್ಲಿ ಇಬ್ಬರೂ ವಚನಕಾರ ಶರಣ ದಂಪತಿಗಳಾಗಿರುವುದು ಒಂದು ವಿಶೇಷವಾಗಿದೆ. 'ನಿಜಶಾಂತೇಶ್ವರ' ಅಂಕಿತದಲ್ಲಿ ರೇಚವ್ವೆ ಶರಣೆ ತನ್ನ ವಚನ ರಚಿಸಿದ್ದಾರೆ. ಮೇಲೆ ಅನುಸಂಧಾನ ಗೈದ ಒಂದು ವಚನ ಮಾತ್ರ ಲಭ್ಯವಾಗಿದೆ. ಶರಣ ವೀರ (ಕುರುಬ)ಗೊಲ್ಲಾಳರು ಸಹಿತವಾಗಿ 'ವೀರ ಬೀರೇಶ್ವರಾ' ಅಂಕಿತದಲ್ಲಿ ಹತ್ತು ವಚನಗಳನ್ನು ರಚಿಸಿದ್ದು ಅವುಗಳಲ್ಲಿ; ಕುರಿಗಾಹಿ ವೃತ್ತಿ ಕುರಿತು ವಿವರಗಳಿವೆ.ಹೆಚ್ಚಿನ ಸಂಗತಿಗಳು ಬೆಡಗಿನ ನುಡಿ ಗಳಲ್ಲಿ ಎರಕ ಹೊಯ್ದಿವೆ. ಇವರು ಮುಗ್ಧತನಕ್ಕೆ ಹೆಸರಾದ ಶರಣರು. ಗೋಲಗೇರಿಯಲ್ಲಿ ವೀರ (ಕುರುಬ)ಗೊಲ್ಲಾಳರ ಹೆಸರಿನ ದೇವಸ್ಥಾನ ಇದ್ದು ಪ್ರತಿವರ್ಷ ಜಾತ್ರೆ ನಡೆಯುತ್ತದೆಂಬುದು ತಿಳಿದು ಬರುತ್ತದೆ.
*ಅಳಗುಂಡಿ ಅಂದಾನಯ್ಯ*