ಕನ್ನಡ ಭಾಷೆಗೆ ಕಳೆ ತಂದ ರಾಜ್ಯ ಸರ್ಕಾರಕ್ಕೆ: ಸಿ.ಎಸ್.ಮಾಲಿ ಪಾಟೀಲ ಅಭಿನಂದನೆ

ಕನ್ನಡ ಭಾಷೆಗೆ ಕಳೆ ತಂದ ರಾಜ್ಯ ಸರ್ಕಾರಕ್ಕೆ: ಸಿ.ಎಸ್.ಮಾಲಿ ಪಾಟೀಲ ಅಭಿನಂದನೆ
ಕಲಬುರಗಿ, ಜೂನ್ 26:“ನಮ್ಮ ಮಾತೃಭಾಷೆ ಎಂದರೆ ಕನ್ನಡ, ನಮ್ಮ ತಾಯಿ ಎಂದರೆ ಕನ್ನಡ” ಎಂಬಂತಹ ಮನದಾಳದ ಮಾತುಗಳಿಗೆ ಇದೀಗ ನಿಜವಾದ ಕಳೆ ನೀಡಿರುವ ಕರ್ನಾಟಕ ರಾಜ್ಯ ಸರಕಾರದ ಇತ್ತೀಚಿನ ನಿರ್ಧಾರವನ್ನು ಅಭಿನಂದಿಸಿರುವ ಕರ್ನಾಟಕ ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ.ಎಸ್. ಮಾಲಿಪಾಟೀಲ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಡಾ. ಶಾಲಿನಿ ರಜ್ನೀಶ್ ನೇತೃತ್ವದ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಘೋಷಣೆಯ ಮೂಲಕ ಕನ್ನಡ ಭಾಷೆ, ನಾಡು, ನುಡಿಯ ರಕ್ಷಣೆಗೆ ಕಟ್ಟುನಿಟ್ಟಾದ ಕ್ರಮ ಕೈಗೊಂಡಿರುವ ರಾಜ್ಯ ಸರಕಾರದ ಈ ಹೆಜ್ಜೆ ಕನ್ನಡ ಪ್ರಜೆಗೆ ಶಕ್ತಿ ತುಂಬಿದ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ. ಬಹು ವರ್ಷಗಳಿಂದ ಕನ್ನಡ ಸಂಘಟನೆಗಳು, ಸಾಹಿತ್ಯಿಕರು, ಕಲಾವಿದರು, ಭಾಷಾಭಿಮಾನಿಗಳು ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಹೋರಾಟ ನಡೆಸುತ್ತ ಬಂದಿದ್ದು, ಇದೀಗ ಅವರ ಪ್ರಾಮಾಣಿಕ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ.
ಇಂದಿನ ಪ್ರಚಲಿತ ಸಂದರ್ಭದಲ್ಲಿ ಕನ್ನಡ ಭಾಷೆ ಹಾಗೂ ಮಾಧ್ಯಮ ಶಾಲೆಗಳು ಹೊರರಾಜ್ಯ ಭಾಷೆಗಳಾದ ಇಂಗ್ಲೀಷ್, ತಮಿಳು, ತೆಲುಗು, ಮರಾಠಿ ಹಿಂದಿ ಭಾಷೆಗಳ ಆಕ್ರಮಣದಿಂದ ಸಂಕಷ್ಟ ಅನುಭವಿಸುತ್ತಿರುವಾಗ, ಸರ್ಕಾರದ ಈ ನಿಲುವು ಸಕಾಲಿಕವಾಗಿದೆ. ಇದುವರೆಗೆ ಹಲವಾರು ಬಾರಿ ಮನವಿಪಡಿಸಲಾದರೂ ಪರಿಣಾಮವಿಲ್ಲದಂತಹ ಸಮಸ್ಯೆಗೆ ಇದೀಗ ಸ್ಪಷ್ಟವಾದ ದಿಟ್ಟ ಪರಿಹಾರ ದೊರೆತಂತಾಗಿದೆ.
ಈ ನಿರ್ಧಾರದಿಂದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಮಾರ್ಗ ವಹಿಸುವುದು ಮಾತ್ರವಲ್ಲದೆ, ಕನ್ನಡ ಸಾಹಿತ್ಯಕ್ಕೂ ನೂತನ ಉತ್ಸಾಹ ನೀಡಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಸಚಿವ, ಶಾಸಕರು ಹಾಗೂ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜ್ನೀಶ್ ಅವರಿಗಾಗಿ ಕನ್ನಡ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.