ಬಾಚಿಕಾಯಕದ ಬಸವಣ್ಣ

ಬಾಚಿಕಾಯಕದ ಬಸವಣ್ಣ

*ದಿನಕ್ಕೊಂದು ವಚನ ಅನುಸಂಧಾನ*  

ಬಾಯಿ ಮುಚ್ಚಿ ಉಂಡಡೆ ಸಾವಧಾನಿಯೆಂಬೆ.

ಕಣ್ಣುಮುಚ್ಚಿ ನೋಡಿದಡೆ ಧ್ಯಾನಜ್ಞಾನಿಯೆಂಬೆ.

ಅಂಗ ನಷ್ಟವಾಗಿ ಕೂಡಿದಡೆ ಲಿಂಗಾಂಗಿಯೆಂಬೆ.

ಇಂತೀ ಭಾವಂಗಳಲ್ಲಿ ಭ್ರಮೆಯಿಲ್ಲದೆ,

ಆವ ಜೀವಂಗಳಲ್ಲಿ ನೋವ ತಾರದೆ,

ಚಿಂತೆ ಸಂತೋಷವೆಂಬ ಅಂತುಕಕ್ಕೊಳಗಾಗದೆ,

ಭ್ರಾಂತರ ಕೂಡಿ ಭ್ರಮೆಗೊಳಗಾಗದೆ,

ಕಾಂತೆಯರ ಕಲೆಯ ಬಲೆಯ ಒಳಗಾಗಿ

ವಿಶ್ರಾಂತಿಯ ನೀಗಾಡಿಕೊಳ್ಳದೆ,

ಸರ್ವರಲ್ಲಿ ಶಾಂತನಾಗಿ ನಿಗರ್ವಿಯಾಗಿ

ನಿಃಕಳನಾಗಿ ನಿಜತತ್ವನಿಳಯ ನಿವಾಸನಾಗಿ

ಪರಬ್ರಹ್ಮಲೋಕ ಆನಂದ ಅವಿರತನಾಗಿಪ್ಪಾತನೆ

ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾದ ಶರಣ.

ಬಾಚಿಕಾಯಕದ ಬಸವಣ್ಣ

ಲಿಂಗಾಯತ ಧರ್ಮದಲ್ಲಿನ ತತ್ವ ಸಿದ್ಧಾಂತಗಳನ್ನ ಓದಿ ಅಥವಾ ಕೇಳಿ ತಿಳಿದುಕೊಳ್ಳುವುದು ಒಂದು ಭಾಗವಾದರೆ, ಅವನ್ನು ಬದುಕಿನಲ್ಲಿ ಪ್ರಾಮಾಣಿಕ ಶ್ರದ್ಧಾಭಕ್ತಿಯಿಂದ ಅಳವಡಿಸಿಕೊಂಡು ಆಚರಿಸಿ ಬಾಳಿ ಬೆಳಗುವುದು ಇನ್ನೊಂದು ಭಾಗವಾಗಿದೆ. ಹೀಗೆ ಅರಿವು ಆಚರಣೆಯ ಮೂಲಕ ಸಾಧನೆ ಮಾಡಿ, ಷಟಸ್ಥಳಗಳನ್ನು ಅರಿತು ಆಚರಿಸುವ ಮೂಲಕ ಸಾಧಿಸಿ, ದಕ್ಕಿದ ಆ ಅತ್ಯುನ್ನತ ಶರಣ ಪದವಿಯನ್ನ ಹೊಂದಿಯೂ ಸಹಿತ ಸಹಜವಾಗಿ ಸಾಮಾನ್ಯವಾಗಿ ಬದುಕುವ ಶರಣನು ನಿಜಕ್ಕೂ ಲಿಂಗಾಯತ ಧರ್ಮದ ಮಹೋನ್ನತ ಜಂಗಮ ಶಕ್ತಿಯಾಗಿದ್ದಾರೆ. ಇಂತಹ ಸಾಧನೆಯ ಮಾಡಿದ ಸಾಧಕ ಮಾತ್ರ ಶರಣ ಪದವಿಗೆ ಅರ್ಹನಾಗಿದ್ದಾನೆ ಹಾಗಾಗಿಯೇ ಅಂದೇ ಶರಣರು; 'ಲಕ್ಷಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣ' ಎಂದಿದ್ದಾರೆ. ಇದನ್ನು ಸರಿಯಾಗಿ ತಿಳಿದುಕೊಂಡು ಲಿಂಗಾಯತ ಬಂಧು ಬಾಂಧವರು ಶರಣ ಪದವಿಯನ್ನ ಪುಕ್ಕಟೆಯಾಗಿ ಬಳಸದೆ ಅದರ ಅತ್ಯುನ್ನತ ಗೌರವವನ್ನು ಹಾಗೂ ಘನತೆಯನ್ನು ಕಾಪಾಡಿಕೊಂಡು ನಡೆಯಲೆಂದು ಶರಣರು ವಚನಗಳ ಆಶಯವಾಗಿದೆ. ಇಲ್ಲಿ ಈಗ

ಪ್ರಸ್ತುತ ಈ ಮೇಲಿನ ಬಾಚಿಕಾಯಕದ ಬಸವಣ್ಣ ಶರಣರ; ನಿಜ ಶರಣನ ಚಿಂತನೆಯ ಸ್ವರೂಪವು ಮತ್ತು ಅದರ ಆಚರಣೆಯ ವಿನ್ಯಾಸವು ಹ್ಯಾಗೆ ಇರಬೇಕು ಎನ್ನುವ ಸಂಗತಿಯನ್ನು ಗಮನಿಸಿದರೆ ಅದು ನಿಜಕ್ಕೂ ಬೆರಗಿನ ಗಿರಿಯೇ ಆಗಿದೆ! ಅಷ್ಟೇ ಅಲ್ಲದೆ ಅದು ಹೆಮ್ಮೆಯ ಮತ್ತು ಅಭಿಮಾನದ ಸಂಗತಿಯಾಗಿಯೂ ಕಾಣಿಸುತ್ತದೆ. ಈ ಸಂಗತಿ ಯನ್ನು ಅರುವಿನಲ್ಲಿಟ್ಟುಕೊಂಡು ಪ್ರಸ್ತುತ ವಚನ ಅನುಸಂಧಾನ ಮಾಡಿ ನೋಡೋಣ.

*ಬಾಯಿ ಮುಚ್ಚಿ ಉಂಡಡೆ ಸಾವಧಾನಿಯೆಂಬೆ.*

*ಕಣ್ಣುಮುಚ್ಚಿ ನೋಡಿದಡೆ* *ಧ್ಯಾನಜ್ಞಾನಿಯೆಂಬೆ.*

*ಅಂಗ ನಷ್ಟವಾಗಿ ಕೂಡಿದಡೆ ಲಿಂಗಾಂಗಿಯೆಂಬೆ.*

ಶರಣರ ಜೀವನದ ರೀತಿ ನೀತಿಯನ್ನು ನಿರೂಪಿ ಸುವಂಥ ಈ ವಚನದ ಒಳನೋಟದ ಪರಿಯು ನಿಜಕ್ಕೂ ಅತ್ಯಂತ ಕುತೂಹಲಕರವಾಗಿದೆ. ಅದು ವೈಜ್ಞಾನಿಕವೂ ಆಗಿದೆ. ಊಟವನ್ನ ಮಾಡುವಾಗ ಬಾಯಿ ಮುಚ್ಚಿ ಊಟ ಮಾಡದೇ ಮಾತನ್ನಾಡು ತ್ತಾ ಊಟ ಮಾಡುವ ನೋಟ ಸಾಮಾನ್ಯ. ಇದು ವೈದ್ಯಕೀಯ ಮತ್ತು ವೈಜ್ಞಾನಿಕ ನೆಲೆಯಲ್ಲಿ ಕೂಡ ತಪ್ಪು. ಆದರೆ ಶರಣರು ಈ ಸತ್ಯವನ್ನು ಬಲ್ಲವರಾ ಗಿದ್ದರು. ಹಾಗಾಗಿ ಉಣ್ಣುವಾಗ ಬಾಯಿಯನ್ನು ಮುಚ್ಚಿ ಉಂಡರೆ; ಅಂಥವರಿಗೆ ಸಾವಧಾನಿ ಎನ್ನು ವೆ ಎನ್ನುವರು. ಕಣ್ಣುಮುಚ್ಚಿ ನೋಡಿದರೆ; ಧ್ಯಾನ ಜ್ಞಾನಿ ಎನ್ನುವೆನೆಂದು ಅನ್ನುವಲ್ಲಿಯೂ ಕೂಡಾ ವೈಜ್ಞಾನಿಕ ಸತ್ಯ ಇದೆ. ಊಟದ ಸಮಯದಲ್ಲಿ; ತನು ಮನ ಮತ್ತು ಅನ್ನ (ಪ್ರಸಾದ) ಏಕತ್ರವಾಗಿ ಕ್ರಿಯಾತ್ಮಕವಾದಲ್ಲಿ ಬಾಯೊಳಗಿನ ಲಾಲಾರಸದ ಸಂಗಾತಲ್ಲಿನ ಆ ಜೈವಿಕ ರಸಸ್ವಾದ ತೃಪ್ತಿದಾಯಕ ಆಧ್ಯಾತ್ಮಿಕ ಆನಂದಾನುಭೂತಿಯನ್ನು ಒದಗಿಸು ತ್ತದೆ. ಆಗ ಅದು ಧ್ಯಾನಸ್ಥಮನದ ಜ್ಞಾನಿಯ ಸ್ಥಿತಿ ಆಗುತ್ತದೆ. ಇನ್ನು ಅಂಗ ನಷ್ಠವಾಗಿ ಕೂಡಿದರೆ ಲಿಂಗಾಂಗಿ ಎಂಬೆ ಎನ್ನುವಲ್ಲಿ ಕೂಡಾ ಉಣ್ಣುವ ಕ್ರಿಯೆಗೆ ಅನ್ವಯಿಸಿದಲ್ಲಿ ಊಟದಲ್ಲಿ ತನ್ಮಯತೆ ಇರಬೇಕೆಂದು ಅದು ಲಿಂಗಾನುಸಂಧಾನದ ರೀತಿ ಯಲ್ಲಿ ಇರಬೇಕೆನ್ನುವ ಅಪೇಕ್ಷೆಯೂ ಸಹಿತವಾಗಿ ಅದು ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸತ್ಯದ ನಿಜ ಸ್ವರೂಪವೇ ಆಗಿದೆ ಹಾಗಾಗಿ ಇಂತಹ ಅಂಗನಷ್ಟ ವಾಗಿ ತನ್ಮಯತೆಯಿಂದ ಕೂಡಿದಡೆ ಲಿಂಗಾಂಗಿ ಯೆಂಬೆ ಎನ್ನುವ ಮೂಲಕ ಇಲ್ಲಿ ಶರಣರು ಲೌಕಿಕ ಮತ್ತು ಆಧ್ಯಾತ್ಮಿಕ ಜೀವನದ ಸಾಮರಸ್ಯ ಬದುಕ

ನ್ನು ಲೋಕಹಿತ ಬಯಸಿ ಮಾಡಬೇಕೆನ್ನುವರು.

*ಇಂತೀ ಭಾವಂಗಳಲ್ಲಿ ಭ್ರಮೆಯಿಲ್ಲದೆ,*

*ಆವ ಜೀವಂಗಳಲ್ಲಿ ನೋವ ತಾರದೆ,*

*ಚಿಂತೆ ಸಂತೋಷವೆಂಬ ಅಂತುಕಕ್ಕೊಳಗಾಗದೆ,*

*ಭ್ರಾಂತರ ಕೂಡಿ ಭ್ರಮೆಗೊಳಗಾಗದೆ,*

*ಕಾಂತೆಯರ ಕಲೆಯ* *ಬಲೆಯ ಒಳಗಾಗಿ*

*ವಿಶ್ರಾಂತಿಯ* *ನೀಗಾಡಿಕೊಳ್ಳದೆ,*

*ಸರ್ವರಲ್ಲಿ ಶಾಂತನಾಗಿ ನಿಗರ್ವಿಯಾಗಿ*

*ನಿಃಕಳನಾಗಿ *ನಿಜತತ್ವನಿಳಯ *ನಿವಾಸನಾಗಿ*

*ಪರಬ್ರಹ್ಮಲೋಕ ಆನಂದ *ಅವಿರತನಾಗಿಪ್ಪಾತನೆ*

*ಬಸವಣ್ಣಪ್ರಿಯ* *ವಿಶ್ವಕರ್ಮಟಕ್ಕೆ ಕಾಳಿಕಾವಿಮರಾಜೇಶ್ವರಲಿಂಗವು ತಾನು ತಾನಾದ ಶರಣ.*

ಈ ರೀತಿಯಾಗಿ ಭಕ್ತ/ಶರಣರು ತಮ್ಮ ಭಾವದಲ್ಲಿ ಭ್ರಮೆಯಿಲ್ಲದೆ, ಯಾವುದೇ ಜೀವಿಗೆ ನೋವನ್ನು

ತಾರದೇ, ಚಿಂತೆ ಸಂತೋಷ ಎಂಬ ಆತಂಕಕ್ಕೂ ಒಳಗಾಗದೇ, ಭ್ರಾಂತಿ ಭ್ರಮೆಗೂ ಒಳಗಾಗದೇ ಕಾಂತೆಯರು ಬೀಸುವ ಅತಿಯದ ಆಶೆ ಬಲೆಗೂ ಬೀಳದೇ, "ಆರಾಮಾಗಿರೋಣ" ಎನ್ನುವ ಕೆಲಸ ಗೇಡಿ ವಿಶ್ರಾಂತಿಯ ರುಚಿಗೆ ಒಳಗಾಗದೇ ಸರ್ವ ಜೀವಿಗಳಲ್ಲಿ ದಯಾಪರರಾಗಿ ಸರ್ವರಲ್ಲಿ ಶಾಂತ ರಾಗಿ ನಿಗರ್ವಿಯಾಗಿ ನಿಃಕಳನಾಗಿ ನಿಜ ತತ್ವನಿಳ ಯ ನಿವಾಸನಾಗಿ ಪರಬ್ರಹ್ಮಲೋಕದ ಆನಂದದ ಅವಿರತನಾಗಿ ಇರುವಾತನೆ ಬಸವಣ್ಣಪ್ರಿಯ ವಿಶ್ವ ಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರ ಲಿಂಗವು ತಾನು ತಾನಾದ ಶರಣ ಎಂದು ಹೇಳುತ್ತಾ ಎಲ್ಲರ ಲ್ಲಿ ಶಾಂತನಾಗಿ, ನಿಗರ್ವಿಯಾಗಿ, ಕಳಂಕವಿಲ್ಲದೇ ನಿಜ ತತ್ವಗಳನ್ನು ಮೈಮನದಲ್ಲಿ ಮನೆಯ ಮಾಡಿ ಕೊಂಡು ಪರಬ್ರಹ್ಮಲೋಕದ ಆನಂದ ಅವಿರತ ನಾಗಿ ಇರುವಾತನೆ ಬಸವಣ್ಣಪ್ರಿಯವಿಶ್ವಕರ್ಮಟ ಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾದ ಶರಣ ಎನ್ನುವ ಮೂಲಕ ನಿಜ ಶರಣನ ನಿಜವಾದ ಇರುವಿಕೆ ಹೇಗಿರಬೇಕೆಂಬ ಬಗ್ಗೆಯೂ ಇಲ್ಲಿ ನಿಜಶರಣನ ವೈದ್ಯಕೀಯ ಸ್ವರೂಪ ಮತ್ತು ವೈಜ್ಞಾನಿಕ ಸತ್ಯ ಸಂಗತಿಯ ಹೇಳುವ ಮೂಲಕ ಶರಣ ಪದವಿ ಔನ್ನತ್ಯವನ್ನು ಎತ್ತರಿಸಿ ತೋರಿಸಿ ಕೊಟ್ಟಿದ್ದಾರೆ.

ಸಂಕ್ಷಿಪ್ತ ಪರಿಚಯ

ಬಡಿಗತನ ಕಾಯಕದ ಈ ಶರಣರ ಕಾಲ ೧೨ ನೇ ಶತಮಾನ. ಅನುಭವ ಮಂಟಪದ ೭೭೦ಅಮರ ಗಣಂಗಳಲ್ಲಿ ಇವರೊಬ್ಬ ವಚನಕಾರ ಶರಣರು. 'ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರಲಿಂಗ' ವಚನಾಂಕಿತದಲ್ಲಿನ ಇವರ ೩೦ ವಚನಗಳು ದೊರೆತಿವೆ. ಇವುಗಳಲ್ಲಿವರು; ತಮ್ಮ ವೃತ್ತಿ ಪರಿಭಾಷೆಯ ಬಳಸಿಕೊಂಡು ವಚನಗಳನ್ನ ರಚಿಸಿದ್ದಾರೆ. ಇವುಗಳು ತತ್ವ ಪ್ರಧಾನವಾಗಿದ್ದು ಕೆಲವು ಬೆಡಗಿನ ರೂಪದಲ್ಲಿವೆ. ಅವರ ಒಂದು ವಚನದಲ್ಲಿ; *..'ಷಡ್ದರ್ಶನಗಳೆಲ್ಲ ನನ್ನ ಬಾಚಿಯ ಕಲೆ. ಮಿಕ್ಕಿನ ಅವಧೂತರುಗಳೆಲ್ಲ ನನ್ನ ಉಳಿ ಯೊಳಗಣ ಒಡವು..'* ಎಂದಿರುವ ಅವರ ಈ ವಿಚಾರ ಗಮನಾರ್ಹವಾಗಿದೆ.

          ಅಳಗುಂಡಿ ಅಂದಾನಯ್ಯ