ಹಾವಿನಾಳ ಕಲ್ಲಯ್ಯ

ವಚನ ಅನುಸಂಧಾನ
ಕರ್ಪುರದ ಕಳ್ಳನ; ಹುಲ್ಲಿನಲ್ಲಿ ಕಟ್ಟಿಸಲು,
ಅಗ್ನಿಯೆಂಬ ಹಿತವ ಬಂದು ಬಿಡಿಸಲಾಗಿ,
ಪಾಶ ಬೆಂದು ಕಳ್ಳ ತನ್ನಲ್ಲಿಯೆ ಅಡಗಿದಂತೆ,
ಶರಣಂಗೆ;
ಬಯಲ ಪಾಶ ಬಂದು ಕಟ್ಟಿರಲು,
ಬಯಲ ಲಿಂಗ ಬಂದು ಬಿಡಿಸಲು,
ಬಯಲು ಬಯಲು ಏಕವಾಯಿತ್ತು.
ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು
ಸದಾ ಶೂನ್ಯವಾಯಿತ್ತು.
ಹಾವಿನಾಳ ಕಲ್ಲಯ್ಯ ವಚನ ಅನುಸಂಧಾನ
ಒಟ್ಟಾರೆಯಾಗಿ ನೋಡಿದ್ರೆ, ನಿಜಕ್ಕೂ ಇದೊಂದು ಸುಂದರವಾದ ಮತ್ತು ಅಷ್ಟೇ ಮನೋಹರವಾದ ದೃಷ್ಟಾಂತದ ಮೂಲಕ ರಚಿಸಿದ ವಚನವಾಗಿದೆ. ಇಲ್ಲಿನ ನೇತ್ಯಾತ್ಮಕ(ನೆಗೆಟಿವ್)ಗುಣ ಸ್ವಭಾವದ ಮೂಲಕವೇ ವಚನವು ತನ್ನ ಇತ್ಯಾತ್ಮಕ ಗುಣದ (ಪೊಜಿಟಿವ್) ಸ್ವಭಾವದ ಕಾರಣದಿಂದ ಒಳ್ಳೆಯ ಪರಿಣಾಮದ ಪರಿಮಳವನ್ನು ಬೀರುತ್ತ, ಅತ್ಯಂತ ಪರಿಣಾಮಕಾರಿಯಾಗಿ ಅರ್ಥವನ್ನು ಹೊರಡಿಸು ವ ಹಾಗೂ ಅರ್ಥಪೂರ್ಣವಾದ ಶರಣ ತತ್ವಗಳ ಸಿದ್ಧಾಂತವನ್ನು ಪ್ರತಿಪಾದಿಸುವ, ಮತ್ತು ತತ್ವವನ್ನ ಮನಗಾಣಿಸುವ ಮಹತ್ವಪೂರ್ಣವಾದ ಬೆಡಗಿನ ವಚನವಾಗಿದೆ. ಇಲ್ಲಿ ಭಕ್ತನ ಸಾಧನಾ ಹಂತದಲ್ಲಿ ಪ್ರಾಥಮಿಕ ನೆಲೆಯ ಸಾಧಿತ ಗುಣದ ಪರಿಶುದ್ಧತೆ ಮತ್ತು ಶರಣನ ಅರಿವಿನ ಅನನ್ಯತಾ ನೆಲೆಯಲ್ಲಿ ನೈಜ ಆಚರಣೆಯ ಒಂದು ಕ್ರಿಯಾತ್ಮಕ ಜೀವನದ ಜ್ವಲಂತ ರೂಪಕದ ಚಿತ್ರಣವನ್ನ ನೇತ್ಯಾತ್ಮಕ (ನೆಗೆ ಟಿವ್) ಬಂಧದಲ್ಲಿ ಕಟ್ಟಿಕೊಟ್ಟಿರುವ ಪ್ರಸ್ತುತ ವಚ ನದ ಪರಿಭಾಷೆಯಂತೂ ಅತ್ಯಂತ ಪರಿಣಾಮಕಾ ರಿಯಾಗಿದೆ. ಮತ್ತು ಇದು ತನ್ಮೂಲಕವೇ ವಚನಾ ಶಯವನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಂಡು ಹರ ಳುಗಟ್ಟಿಸಿ ಥಳಥಳಿಸಿ ಹೊಳೆಸುತ್ತದೆ ಅನಿಸುತ್ತದೆ.
ವಚನವನ್ನು ಅರ್ಥೈಸುವ ಸಲುವಾಗಿ ಅದನ್ನಿಲ್ಲಿ ಎರಡು ಭಾಗ ಮಾಡಿ ನೋಡೋಣ. ಮೊದಲನೆ ಭಾಗದಲ್ಲಿ ಏನಿದೆ ಎನ್ನುವುದ ಅನುಸಂಧಾನದ ಮೂಲಕ ಈಗ ಪರಿಶೀಲಿಸಿ ನೋಡೋಣ.
ಕರ್ಪುರದ ಕಳ್ಳನ; ಹುಲ್ಲಿನಲ್ಲಿ ಕಟ್ಟಿಸಲು,
ಅಗ್ನಿಯೆಂಬ ಹಿತವ ಬಂದು ಬಿಡಿಸಲಾಗಿ,
ಪಾಶ ಬೆಂದು ಕಳ್ಳ ತನ್ನಲ್ಲಿಯೆ ಅಡಗಿದಂತೆ,
ಈ ದೃಷ್ಟಾಂತವು ತನ್ನ ರೂಪಕದ ಪರಿಭಾಷೆಯ ಹೊಳಹಿನಲ್ಲಿದೆ. ಇಲ್ಲಿ ಕರ್ಪೂರದ ಕಳ್ಳ ಅಂದರೆ ಈ ಮೊದಲು ಭವಿಯಾಗಿದ್ದು ಈಗ ಭಕ್ತನಾದವ ನ ತನುವಿನೊಳಗಿನ 'ಮನಸ್ಸು' ಎಂದು ಭಾವಿಸಿ ದಲ್ಲಿ, ಆ ಮನಸ್ಸನ್ನು ಅಂಗದೊಳಗಿನ ಅರಿಷಡ್ವ ರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಹುರಿಗೊಳಿಸಿ ಹೊಸೆದಂಥ ಹುಲ್ಲಿನಲ್ಲಿ ಕಟ್ಟಿರಲು, ಅದನ್ನ 'ಅರಿವಿನಾಚರಣೆ,' ಯಂಬ ಅಗ್ನಿ ಬಂದು ಬಿಡಿಸಲಾಗಿ! ಅರಿಷಡ್ವರ್ಗ ಗಳ ಹುಲ್ಲಿನ ಪಾಶವು ಬೆಂದು, ಕರ್ಪೂರದ ಕಳ್ಳ (ಮನಸ್ಸು) ಆಗ ತನ್ನಲ್ಲಿಯೇ ತಾನು ಚಿತ್ ಚೈತನ್ಯ ದಲ್ಲಿ ಅಡಗಿದಂತೆಂದು ಭವಿಯಾದವ ಭಕ್ತನಾಗಿ ಪರಿವರ್ತನೆ ಹೊಂದಿದ ವಿಚಾರ ಪ್ರಸ್ತುತ ವಚನ ದೀ ಭಾಗದಲ್ಲಿ ಅಡಕವಾಗಿದೆ ಎನಿಸುತ್ತದೆ. ಈಗ
ವಚನದ ಎರಡನೆ ಭಾಗ ಪರಿಶೀಲಿಸೋಣ.
ಶರಣಂಗೆ;
ಬಯಲ ಪಾಶ ಬಂದು ಕಟ್ಟಿರಲು,
ಬಯಲ ಲಿಂಗ ಬಂದು ಬಿಡಿಸಲು,
ಬಯಲು ಬಯಲು ಏಕವಾಯಿತ್ತು.
ಮಹಾಲಿಂಗ *ಕಲ್ಲೇಶ್ವರನೆಂಬ ಸಂಪತ್ತು
ಸದಾ ಶೂನ್ಯವಾಯಿತ್ತು.
ಇಲ್ಲಿ, ಶರಣತತ್ವ ಸಿದ್ಧಾಂತದ ಪ್ರಕಾರ; ಅಂಗದ ಒಳಗಿರುವ ಆರು ಕ್ರಿಯಾತ್ಮಕ ಚೈತನ್ಯದ (ಷಟ್) ಸ್ಥಳಗಳು ಪ್ರಕೃತಿ ಸಹಜವಾದ ಪಂಚ ತತ್ವಗಳಾದ ಪೃಥ್ವಿ ನೀರು ಅಗ್ನಿ ಗಾಳಿ ಮತ್ತು ಆಕಾಶ ಈ ಐದು ಬಯಲ ಪಾಶಗಳ ಮೂಲಕ ಬಂಧಿಸಲ್ಪಟ್ಟಿವೆ. ಇವುಗಳ ಮಲಗಳನ್ನು ಬಿಡಿಸಲು, ಚಿದ್ಬಯಲಿನ ಕುರುಹು ಆದ 'ಇಷ್ಟಲಿಂಗ'ದ ಅನುಸಂಧಾನವನ್ನ ಮಾಡಿ, ತನ್ಮೂಲಕ ಸದಾ ಜಾಗ್ರತೆಯ ಅರಿವನ್ನು ಮಾಡಿಕೊಂಡಲ್ಲಿ ಈ ಅಂಗದಲ್ಲಿರುವ ಚಿತ್ ಶಕ್ತಿ ಕೇಂದ್ರಗಳಲ್ಲಿನ ಬಯಲುತತ್ವವು ಪಂಚಾಚಾರದ ಸಖ್ಯದ ಒಡನಾಟದಲ್ಲಿ ಶರಣತ್ವವನ್ನು ಸಾಧಿಸಿ, ಸ್ವತಃ ಬಯಲು ಸ್ವರೂಪವಾಗಿ, ಹೊರಗಿರುವಂಥ ವಿಶ್ವಾತ್ಮಕವಾದ ಮಹಾ ಬಯಲಲ್ಲಿ ಬೆರೆತು ಐಕ್ಯ ವಾದಂತೆ ಎಂದು ಹೇಳುವ ವಚನವು; ಬಯಲು ಬಯಲನು ಸೇರಿದ ಕಾರಣ ಪ್ರಾಪ್ತವಾದ ಫಲವೇ 'ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು' ಎಂದು ಸಾರುತ್ತಲೇ, ಅದು ಸದಾ ಶೂನ್ಯವಾಯಿತ್ತೆಂದು ಹೇಳುವ ಮೂಲಕ ಪ್ರಸ್ತುತ ವಚನ ಶರಣತತ್ವ - ಸಿದ್ಧಾಂತದಂತೆ 'ಬಯಲು'/ 'ಶೂನ್ಯಸಂಪಾದನೆ' ಎಂಬ ಪರಿಭಾಷೆಯನ್ನು ಸ್ಪಷ್ಟವಾಗಿ ಅನಾವರಣ ಗೊಳಿಸುತ್ತದೆ. ಹಾವಿನಾಳ ಕಲ್ಲಯ್ಯ ಶರಣರ ಈ ಅಪರೂಪದ ಶೈಲಿಯಲ್ಲಿ ಇದನ್ನು ಪ್ರಸ್ತುತ ವಚನ ದಲ್ಲಿ ಅತ್ಯಂತ ಅನೂಹ್ಯ ಹಾಗೂ ಆಕರ್ಷಕವಾಗಿ ವಚನಕಾರರು ಇಲ್ಲಿ ಎರಕವನ್ನು ಹೊಯ್ದಿದ್ದಾರೆ.
ಸಂಕ್ಷಿಪ್ತ ಪರಿಚಯ
೧೨ನೆ ಶತಮಾನದ ಕಲ್ಲಯ್ಯನವರು ಅಕ್ಕಸಾಲಿಗ ಮನೆತನಕ್ಕೆ ಸೇರಿದವರಾದ್ದರಿಂದ ಆಭರಣಗಳನ್ನ ತಯಾರಿಸುವ ಕಾಯಕ ಅವರದಾಗಿತ್ತು. ಇವರು ಹುಟ್ಟಿದ ಸ್ಥಳ ವಿಜಾಪುರ ಜಿಲ್ಲೆಯ ಹಾವಿನಾಳು. ಇಲ್ಲಿನ ಕಲ್ಲಿನಾಥ ಇವರ ಮೊದಲ ಆರಾಧ್ಯದೈವ ಈಗ(ಇಷ್ಟಲಿಂಗ) ಆಗಿದ್ದಾನೆ. ಹಾವಿನಾಳದಿಂದ ಕಲ್ಯಾಣಕ್ಕೆ ಬಂದ ಕಲ್ಲಯ್ಯನವರು; ಶರಣರೆಲ್ಲರ ಸಂಪರ್ಕದ ಕಾರಣದಿಂದ ಅನುಭಾವಿಗಳಾಗಿದ್ದ ಇವರು ಅನುಭವ ಮಂಟಪದ ೭೭೦ ಅಮರ ಗಣಂಗಳ ಪೈಕಿ ಒಬ್ಬ ವಚನಕಾರ ಶರಣರಾಗಿದ್ರು ಇವರು "ಮಹಾಲಿಂಗ ಕಲ್ಲೇಶ್ವರ " ಅಂಕಿತದಲ್ಲಿ ರಚಿಸಿದ ೧೦೩ ವಚನ ದೊರಕಿವೆ. ಆ ವಚನಗಳ ಲ್ಲಿ; ಭಕ್ತಿನಿಷ್ಠೆ, ಶರಣತತ್ವದ ವಿವೇಚನೆ ಪರಮತ ಖಂಡನೆ, ನೀತಿ ಭೋಧೆ, ಆತ್ಮಶೋಧನೆ ಶರಣರ ಸ್ತುತಿ ಇವು ಪ್ರತಿಪಾದನೆಯಾಗಿವೆ. ಅಷ್ಟಾವರಣ, ಲಿಂಗಾಂಗ ಸಾಮರಸ್ಯ, ನಿಷ್ಕಾಮ ಸೇವೆ ಮತ್ತು ಅನುಭಾವ -ಈ ಮೊದಲಾದ ವಿಷಯಗಳ ಕುರಿತ ಪ್ರಸ್ತಾಪವೂ ಈ ವಚನಗಳಲ್ಲಿವೆ. ಕಲ್ಯಾಣಕ್ರಾಂತಿ ಯ ನಂತರದಲ್ಲಿ ಕಲ್ಲಯ್ಯನವರು ಸೊಲ್ಲಾಪುರಕ್ಕೆ ತೆರಳಿ ನಂತರದ ದಿನಗಳಲ್ಲಿ ಅವರು ಅಲ್ಲಿಯೇ ಐಕ್ಯರಾಗಿದ್ದು, ಸಿದ್ಧರಾಮೇಶ್ವರ ದೇವಾಲಯದ ಪ್ರಾಕಾರದಲ್ಲಿ ಇವರ ಸಮಾಧಿ ಇದೆ ಎನ್ನಲಾಗಿದೆ.
ಅಳಗುಂಡಿ ಅಂದಾನಯ್ಯ