ಬಸವಣ್ಣನವರ ಜಯಂತಿ ಒಂದು ದಿನಕ್ಕೆ ಸೀಮಿತವಾಗದಿರಲಿ: ಶಾಸಕ ಪ್ರಭು ಚವ್ಹಾಣ

ಗಡಿಕುಶನೂರನಲ್ಲಿ ಅದ್ದೂರಿ ಬಸವ ಜಯಂತಿ
ಬಸವಣ್ಣನವರ ಜಯಂತಿ ಒಂದು ದಿನಕ್ಕೆ ಸೀಮಿತವಾಗದಿರಲಿ: ಶಾಸಕ ಪ್ರಭು ಚವ್ಹಾಣ
ವಿಶ್ವಗುರು ಬಸವಣ್ಣನವರ ಜಯಂತಿಯನ್ನು ನೆಪ ಮಾತ್ರಕ್ಕೆ ಆಚರಿಸದೇ ಅವರ ವಿಚಾರಧಾರೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಔರಾದ ತಾಲ್ಲೂಕಿನ ಗಡಿಕುಶನೂರ ಗ್ರಾಮದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಇತ್ತೀಚೆಗೆ ಅಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನತೆಯ ಹರಿಕಾರ ಮತ್ತು ಮಹಾನ್ ಮಾನವತಾವಾದಿ ಬಸವಣ್ಣನವರ ಆದರ್ಶ ಸಾರ್ವಕಾಲಿಕ. 12ನೇ ಶತಮಾನದಲ್ಲೇ ಸಮಾಜದಲ್ಲಿನ ಓರೆಕೋರೆಗಳನ್ನು ಸರಿಪಡಿಸಲು ಮುಂದಾದ ಮೇರು ಸಮಾಜ ಸುಧಾರಕರು. ಕಾಯಕದ ಮಹತ್ವ ಸಾರುವ ಅವರ ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದರು.
ಅವರು ಸ್ಥಾಪಿಸಿದ ಅನುಭವ ಮಂಟಪ ಸಂಸದೀಯ ವ್ಯವಸ್ಥೆಯ ಮೂಲ. ಅನುಭವ ಮಂಟಪದಲ್ಲಿ ಸಾಮಾನ್ಯರು ಕೂಡ ತಮ್ಮ ಅನುಭವ ಮತ್ತು ಅನುಭಾವ ಹಂಚಿಕೊಳ್ಳಲು ಅವಕಾಶವಿತ್ತು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪಕ್ಕೆ ಅನುದಾನ ಮಂಜೂರು ಮಾಡಿಸಿ ಮುಖ್ಯಮಂತ್ರಿಯವರಿಂದ ಭೂಮಿ ಪೂಜೆ ನೆರವೇರಿಸಿರುವುದು ಅವಿಸ್ಮರಣೀಯ ಘಳಿಗೆಯಾಗಿದೆ. ಗಡಿಕುಶನೂರನಲ್ಲಿ ಸುಂದರ ಮತ್ತು ಭವ್ಯ ಅನುಭವ ಮಂಟಪ ನಿರ್ಮಿಸಲಾಗಿದೆ. ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡುವೆ ಎಂದು ಹೇಳಿದರು. ಪ್ರಮುಖರಾದ ಹಣಮಂತರಾವ ಪಾಟೀಲ, ಚಂದ್ರಕಾಂತ ಪಟ್ನೆ ಮಾತನಾಡಿದರು.
ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಕೇರಬಾ ಪವಾರ, ಕಂಟೆಪ್ಪ ಗಂದಿಗೂಡೆ, ಪ್ರದೀಪ ಯನಗುಂದೆ, ಸುಧಾಕರ ಬಚರೆ, ಅಶೋಕ ಮಾಶೆಟ್ಟಿ, ಬಾಬುರಾವ ಶೇರಿಕಾರ, ವಿಜಯಕುಮಾರ ಪಟ್ನೆ, ಅಡವೆಪ್ಪ ಪಟ್ನೆ, ಸುಭಾಷ ಹುಲಸೂರೆ, ಮಲ್ಲಿಕಾರ್ಜುನ ಕೋಟೆ ಸೇರಿದಂತೆ ಇತರರು.