ಕಲಬುರಗಿ ರಾಮಮಂದಿರದಲ್ಲಿ ಮಾ.19ರಿಂದ ರಾಮೋತ್ಸವಕ್ಕೆ ಭರದ ಸಿದ್ಧತೆ
ಕಲಬುರಗಿ ರಾಮಮಂದಿರದಲ್ಲಿ ಮಾ.19ರಿಂದ ರಾಮೋತ್ಸವಕ್ಕೆ ಭರದ ಸಿದ್ಧತೆ
ಕಲಬುರಗಿ : ಶ್ರೀ ಪಾದೂರು ರಾಮಕೃಷ್ಣ ತಂತ್ರಿ ಚಾರಿಟಬಲ್ ಟ್ರಸ್ಟ್ ನ ಕಲಬುರಗಿಯ ರಾಮಮಂದಿರ ವತಿಯಿಂದ ಮಾರ್ಚ್ 19ರಿಂದ 26ರ ವರೆಗೆ ರಾಮೋತ್ಸವ ಕಾರ್ಯಕ್ರಮವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮದಿಂದ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ರಾಮೋತ್ಸವದ ಅಂಗವಾಗಿ ಮಾ. 19ರಿಂದ 26 ರವರೆಗೆ ಪ್ರತಿದಿನ ಸಾಯಂಕಾಲ 6.30 ಕ್ಕೆ ಬೀದರ್ ಉತ್ತರಾದಿ ಮಠದ ಅಜೇಯ ಆಚಾರ್ಯರಿಂದ "ಶ್ರೀಮದ್ ರಾಮಾಯಣ"ವಿಶೇಷ ಉಪನ್ಯಾಸ ಕಾರ್ಯಕ್ರಮ ನೆರವೇರಲಿದೆ. ಸಾಯಂಕಾಲ 6:30 ಕ್ಕೆ ಉಪನ್ಯಾಸ ಮಾಲೆ ಹಾಗೂ ರಾಮೋತ್ಸವ ಕಾರ್ಯಕ್ರಮವನ್ನು ಕಲಬುರಗಿಯ ವೆಂಕಟೇಶ್ವರ ಆಟೋಮೊಬೈಲ್ಸ್ ನ ಕೆ.ಬಿ ಕುಲಕರ್ಣಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಬುರಗಿ ನಗರ ಬಿಜೆಪಿ ಅಧ್ಯಕ್ಷರಾದ ಚಂದು ಪಾಟೀಲ್ ಮತ್ತು ಹಿರಿಯ ನ್ಯಾಯವಾದಿಗಳಾದ ಪಿ.ವಿ ದೇಶಪಾಂಡೆ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅನಂತ ಚಿಂಚನಸೂರ ನೃತ್ಯ ಸಂಯೋಜನೆಯಲ್ಲಿ ಕಲಬುರಗಿಯ ವರ್ಣಸಿಂಧು ನೃತ್ಯ ಕಲಾ ಕೇಂದ್ರದ ಕಲಾವಿದರು ನಡೆಸಿಕೊಡಲಿದ್ದಾರೆ
ಮಾ. 26ರಂದು ರಾಮನವಮಿಯ ದಿನ ದಿನಪೂರ್ತಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಬೆಳಿಗ್ಗೆ 8 ಕ್ಕೆ ಪಂಚಾಮೃತ ಅಭಿಷೇಕ, ಬೆಳಗ್ಗೆ 8.30 ರಿಂದ 9.30 ರವರೆಗೆ ಹಂಸ ನಾಯಕ ಮತ್ತು ಲಕ್ಷ್ಮಿ ನಾರಾಯಣ ಪಾರಾಯಣ ಸಂಘಗಳಿಂದ ಪಾರಾಯಣ ಕಾರ್ಯಕ್ರಮ ನೆರವೇರಲಿದೆ. 9.30 ರಿಂದ 11.30 ರವರೆಗೆ ವೈಷ್ಣವಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, 11 ಗಂಟೆಗೆ ಶ್ರೀರಾಮ ಅಷ್ಟೋತ್ತರ 12 ಗಂಟೆಗೆ ಮಹಾಪೂಜೆ 12:30ಕ್ಕೆ ಶ್ರೀರಾಮ ಜನನ,ತೊಟ್ಟಿಲು ಸೇವೆ,ಮಧ್ಯಾಹ್ನ ಒಂದು ಗಂಟೆಗೆ ಪ್ರಸಾದ ವಿತರಣೆ ಹಾಗೂ ರಾತ್ರಿ 8 ಗಂಟೆಗೆ ಪಲ್ಲಕ್ಕಿ ಉತ್ಸವ ಮತ್ತು 8.30ಕ್ಕೆ ಶ್ರೀರಂಗ ಪೂಜೆ ನೆರವೇರಲಿದೆ ಎಂದು ರಾಮ ಮಂದಿರದ ಕಿಶೋರ ದೇಶಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
