ಡೋಹರ ಕಕ್ಕಯ್ಯ

ಡೋಹರ ಕಕ್ಕಯ್ಯ

ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲವಾಗಿ. 

ಭಾವಿಸಲರಿಯೆ ಬೆರಸಲರಿಯೆ 

ಭಾವ ನಿರ್ಭಾವವಾಯಿತ್ತಾಗಿ. 

ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ.

ಜ್ಞಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ.

      *ಡೋಹರ ಕಕ್ಕಯ್ಯ*    *ವಚನ ಅನುಸಂಧಾನ*

ಅಪ್ಪ ಬಸವಣ್ಣನವರ ಹಿರಿಯ ಸಮಕಾಲೀನ ಶರಣರಾದ #ಡೋಹರ #ಕಕ್ಕಯ್ಯ ಶರಣರ ಈ ಮೇಲಿನ ವಚನವನ್ನು ಹಲವಾರು ಬಾರಿ ಓದಿದ್ದೆ. ಆಗ ನನಗೆ ಹೊಳೆದ ಅರ್ಥ ವಿಸ್ತಾರಕ್ಕೂ ಈಗಿನ ಓದಿಗಾದ ಅನುಭವದ ಅನುಭೂತಿಗೂ ನಿಜಕ್ಕೂ ಅಜಗಜಾಂತರದ ವ್ಯತ್ಯಾಸವಿದೆ ಎಂಬುದು ಈಗ ನನ್ನ ಅರಿವಿಗೆ ಬಂತು!

ಶರಣರ ತಾತ್ವಿಕ ಸಿದ್ಧಾಂತಗಳು; ಪರಿಶುದ್ಧವಾದ ಹೃನ್ಮನದ ಹಂಬಲದ ಹಸಿವಿಗೆ ಮಾತ್ರ ದಕ್ಕುತ್ತವೆ

ಎನ್ನುವುದನ್ನು ಮಾತ್ರ ವಿನಯದಿಂದ ಹೇಳಬಲ್ಲೆ.

ಅದರ ಜೊತೆಗೆ ಶರಣರ ತತ್ವ ಸಿದ್ಧಾಂತಗಳನ್ನು ಮೊದಲು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇ ಆದರೆ ವಚನಗಳು; ಖಂಡಿತಾ ಇಂಬಿಟ್ಟುಕೊಂಡು ತಮ್ಮ ನಿಜರೂಪದ ಕಾರುಣ್ಯ ರಸ ಪ್ರಸಾದವನ್ನು ಕರುಣಿಸಿ ಉಣಿಸುತ್ತಾ ತಾಯಿ ಹಾಗೆ ಬರಸೆಳೆದು ಮೈದಡವಿ ಖಂಡಿತಾ ಸಂತೈಸುತ್ತವೆ. ಮೇಲಿನ ಈ

ಡೋಹರ ಕಕ್ಕಯ್ಯ ಶರಣರ ಪ್ರಸ್ತುತ ವಚನವನ್ನ ಈಗ ಇಲ್ಲಿ ವಿಶ್ಲೇಷಿಸಿ ನೋಡೋಣ.

*ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲವಾಗಿ.*

*ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ.*

*ಧ್ಯಾನ ಮೌನವನರಿಯೆ*

*ಧ್ಯಾನಾತೀತ* *ತಾನೆಯಾಯಿತ್ತಾಗಿ.*

ವಚನದ ಈ ಸಾಲುಗಳು; ತನು ಮನ ಭಾವದ ಮೂರು ನೆಲೆಯಲ್ಲಿನ ತಮ್ಮ ಆತ್ಮಾನುಸಂಧಾನ ದ ಸ್ಥಿತಿಗತಿಯ ಅಭಿವ್ಯಕ್ತಿಯನ್ನ ಅನುಕ್ರಮವಾಗಿ ಒಂದೊಂದು ವಾಕ್ಯದಲ್ಲಿ ಹರಳುಗಟ್ಪಿಸಿಕೊಂಡಿವೆ

*ಮೊದಲನೇ ವಾಕ್ಯವು* ತನುವಿನ ಅನುಭವವನ್ನು ಹೇಳುತ್ತದೆ. ಪರಾತ್ಪರ ಪರವಸ್ತುವನ್ನ ನೆನೆಯಲು

ಮತ್ತು ನಿರ್ಧರಿಸಲು ತನು ಶುದ್ಧವಾಗಿ ಸಜ್ಜಾಗಿದೆ ಎಂದರೂ ಅದಕ್ಕೆ ಮನಸ್ಸಿನ ಅಗತ್ಯವಿದೆ. ಆದರೆ ಆ ಮನ ಇಲ್ಲವಾಗಿದೆ! ಎನ್ನುವಂಥಾ ಮಾತು ಇಲ್ಲಿ ಮಹತ್ವದ್ದಾಗಿದೆ. ಯಾಕೆಂದರೆ ತನ್ಮೂಲಕವಾಗೇ ಇಲ್ಲಿ ತನು ಮನಗಳು ಸಾಧನೆ ಮಾಡಿದ ಕಾರಣ ದಿಂದ ತಮ್ಮ ಇತಿಮಿತಿಗಳನ್ನ ನೀಗಿಕೊಂಡು ಮಿತಿ ಮೀರಿ ಬೆಳೆದು ಅರಿವಿನ ಊರ್ಧ್ವಮುಖಿ ಯಾಣ ವನ್ನ ಸುಗಮವಾಗಿಸಿವೆ ಎನ್ನುವುದು ಈ ಮಾತಿನ ಮುಖ್ಯವಾದ ಅರ್ಥವಾಗಿದೆ.

*ಎರಡನೇ ವಾಕ್ಯವು* ತನು ಮನದ ಸೀಮೆಯನ್ನು ದಾಟಿಕೊಂಡು ಭಾವ ಸ್ಥಿತಿಯ ಬಯಲಿಗೆ ಬಂದು ತಲುಪಿದೆ. ಆದರೆ ತನು ಮನಗಳಂತೆಯೇ ಭಾವ ಕೋಶವೂ ಕೂಡಾ ಭಕ್ತನ ಸಾಧನೆಯ ಕಾರಣಕ್ಕೆ ಪಕ್ವಗೊಂಡು ತನ್ನ ಭಾವಿಸುವ ಮತ್ತು ಬೆರೆಸುವ ಗುಣಧರ್ಮವನ್ನ ನೀಡಿಕೊಂಡ ಕಾರಣದಿಂದಾಗಿ

ನಿರ್ಭಾವವಾಗಿತ್ತು ಎನ್ನುವುದು ತನುತ್ರಯಗಳನ್ನ ಮೀರಿ ಬೆಳೆದ ಸಾಧಕನ ಸ್ಥಿತಿಯನ್ನು ತೋರುತ್ತದೆ

*ಮೂರನೇ ವಾಕ್ಯವು,* ತನು ಮನ ಭಾವಗಳನ್ನು ಕಳಚಿಕೊಂಡು ಶೂನ್ಯ ಸ್ಥಿತಿಗೇರಿ ಅಲ್ಲಿಯೇ ನಿಂತ ಸುಚಿತ್ತದ ಶೂನ್ಯಸ್ಥಿತಿಯನ್ನು ಸಾದರಪಡಿಸುತ್ತದೆ. ಅಲ್ಲಿಯದು ಧ್ಯಾನ ಮತ್ತು ಮೌನದ ನಿರಾಲಂಬ ಸ್ಥಿತಿಯಾಗಿದೆ. ಹಾಗಾಗಿ ಅಲ್ಲಿ ಧ್ಯಾನಾತೀತವಾದ ನಿಷ್ಕಲಸ್ಥಿತಿಯ ಕಾರಣದಿಂದಾಗಿಯೇ ಸುಚಿತ್ತವು ಪರವಸ್ತುವಿನಲ್ಲಿ ಬೆರೆತು ನೆಲೆನಿಂತುಕೊಂಡಿರುವ ಅಂತಿಮ ಗಂತವ್ಯದ ಐಕ್ಯ ಸ್ಥಿತಿಯನ್ನು ವಚನದ ಈ ಸಾಲು ದ್ಯೋತಿಸುತ್ತದೆ. ಹಾಗಾಗಿ,

*#ಜ್ಞಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿ* *ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ #ಸುಖಿಯಾಗಿರ್ದೆ.*

ಸಾಧಕನ ಅರಿವು ಆಚರಣೆ ಮತ್ತು ಅನುಭಾವದ

ಗುರು ಲಿಂಗ ಜಂಗಮ ತತ್ವಗಳು ತನುತ್ರಯಗಳ ಜಯಿಸಿ, ಐಕ್ಯಸ್ಥಿತಿಯನ್ನು ಸಾಧಿಸಿದ ಸ್ಥಿತಿಯಲ್ಲಿ;

ತಿಳಿಯುವವರು, ತಿಳಿವು ಮತ್ತು ತಿಳಿಯಲ್ಪಡುವ ಆ ಪರಮ ಗಂತವ್ಯದ ಸೀಮೆಯ ರೇಖೆಗಳನ್ನೆಲ್ಲಾ ಮೀರಿದ ಕಾರಣದಿಂದಾಗಿ ವಚನಕಾರ ಡೋಹರ ಕಕ್ಕಯ್ಯ ಶರಣರು ಅಭಿನವಮಲ್ಲಿಕಾರ್ಜುನನಲ್ಲಿ ತಾವು ಪರಮ *#ಸುಖಿಯಾಗಿರ್ದೆ* ಎಂದೆನ್ನುವಲ್ಲಿ ಈ ಡೋಹರ ಕಕ್ಕಯ್ಯಶರಣರು ಸಾಧಿಸಿರುವಂಥ ಶರಣಮಾರ್ಗದ ಆ ದಿವ್ಯ ಸಾಧನೆಯ ಪರಿಪಕ್ವದ ಆಧ್ಯಾತ್ಮಿಕ ಔನ್ನತ್ಯವನ್ನು ಪ್ರಸ್ತುತ ಈ ಮೇಲಿನ ಅವರ ವಚನ ಸಾಕ್ಷೀಕರಿಸಿದೆ ಎಂದು ಹೇಳಬಹು ದಾಗಿದೆ.

                     *ಅಳಗುಂಡಿ ಅಂದಾನಯ್ಯ*