ಸಗರದ ಬೊಮ್ಮಣ್ಣ ಶರಣ

ಸಗರದ ಬೊಮ್ಮಣ್ಣ ಶರಣ

(ಅಂತರ್ಜಾಲ ಚಿತ್ರ)

ಹೂವ ಕೊಯ್ಯುವರಲ್ಲದೆ, ಹೂವಿನ 

ಗಂಧವ ಕೊಯ್ದವರುಂಟೆ ಅಯ್ಯಾ?

ಮಾತನಾಡುವರಲ್ಲದೆ, ಮಾತಿನ ಭೇದದ 

ವಾಸನೆಯ ಕಂಡವರುಂಟೆ ಅಯ್ಯಾ?

ಇದು ನೀತಿಯ ಒದಗು, ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವ ಶುದ್ಧವಾಗಿರಬೇಕು.

ಮಾತನರಿದಾಡುವಲ್ಲಿ, ಮಾತಿನ ರೀತಿಗೆ 

ತಾ ಒದಗು ನಿಹಿತವಾಗಿರ ಬೇಕು.

ಅದು ಕೂಟಸ್ಥ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ. 

*ಸಗರದ ಬೊಮ್ಮಣ್ಣ ಶರಣ*ವಚನ ಅನುಸಂಧಾನ

ಲೌಕಿಕ ಬದುಕಿನ ಅನುಭವ ಮತ್ತು ಅದರ ಇತಿ ಮಿತಿಯಾಚೆಯ ಅಗತ್ಯವನ್ನೂ ಅಪ್ಪ ಬಸವಾದಿ ಶರಣರು ಮನಗಂಡು ಬಲ್ಲವರಾಗಿದ್ದರು. ಹಾಗೆ ಯೇ ಅದನ್ನವರು ತಮ್ಮ ಅಲೌಕಿಕ ಅನುಭಾವಿಕ ಬದುಕಿನ ಅಭಿವ್ಯಕ್ತಿಯಲ್ಲಿ ಸಮರ್ಥವಾಗಿ ಬಳಸಿ ಕೊಂಡು ಅನುಭಾವದ ಅಂತಿಮ ಗಂತವ್ಯದ ಆ ಸತ್ಯದ ಪರಿಣಾಮವನ್ನು ವಚನಗಳ ಅಕ್ಷ(ಯ)ರ ಪಾತ್ರೆಯಲ್ಲಿ ಕಾಪಿಟ್ಟು ಪರಿಶುದ್ಧವಾದ ಹೃನ್ಮನ ಗಳಿಗೆ ಮುಟ್ಟಿಸುವಲ್ಲಿಯೂ ಯಶಸ್ವಿಯಾದರು. ಹಾಗಾಗಿಯೇ ಈ ಪ್ರಯೋಗ ಪರಿಣಾಮದ ನಿಜ ಪ್ರಯೋಜನ ವಚನ ಸಾಹಿತ್ಯದಲ್ಲಿ ಹೆಪ್ಪುಗಟ್ಟಿದೆ.

ಈ ವಿಚಾರದ ಅರಿವಿನ ಬೆಳಕಿನಲ್ಲಿ; ಪ್ರಸ್ತುತ ಈ ಮೇಲಿನ ಸಗರದ ಬೊಮ್ಮಣ್ಣ ಶರಣರ ವಚನದ ಅನುಸಂಧಾನ ಮಾಡುವ ಮೂಲಕ ಪ್ರಾಸ್ತಾವಿಕ ಮಾತುಗಳ ಸತ್ಯವನ್ನು ಮನಗಾಣಬಹುದಾಗಿದೆ. ಈಗ ಪ್ರಸ್ತುತ ವಚನದ ಅನುಸಂಧಾನವನ್ನು ಇಲ್ಲಿ ಮಾಡಲು ಪ್ರಯತ್ನಿಸೋಣ.

*ಹೂವ ಕೊಯ್ಯುವರಲ್ಲದೆ,* *ಹೂವಿನ*

*ಗಂಧವ ಕೊಯ್ದವರುಂಟೆ ಅಯ್ಯಾ?*

*ಮಾತನಾಡುವರಲ್ಲದೆ, ಮಾತಿನ ಭೇದದ* 

*ವಾಸನೆಯ ಕಂಡವರುಂಟೆ ಅಯ್ಯಾ?

ಅತ್ಯಂತ ಸುಂದರವಾದ ನುಡಿಗಳ ಈ ಸಾಲಿನಲ್ಲಿ ಕಾವ್ಯದ ಕಲರವ ಕೇಳಿಸುತ್ತದೆ. ಹೂವನ್ನು ಕಂಡು ಚೆಲ್ಲಿದ ಅದರ ಚೆಲುವಿಗೆ ಮನಸೋತು ಬಳ್ಳಿಯ ಕರುಳಿನಿಂದ ಅದನ್ನು ಕಿತ್ತುಕೊಳ್ಳುವವರು ಬಹಳ ಜನ. ಆದರೆ ಇಲ್ಲಿ ಶರಣರ ಮನೋಭಾವದ ನಿಜ ತುಡಿತ ಏನೆಂದರೆ, ಸಸ್ಯಗಳಿಗೂ ಜೀವವಿದೆಯಂ ಬ ಅರಿವು! ಹೂವನ್ನು ಕೊಯ್ಯುವ ಹಿಂಸೆಯನ್ನು ಒಪ್ಪಲಾಗದೆ ಹೂವಿನ ಭೌತಿಕ ಚೆಲುವಿಗಿಂತಲೂ ಅದರ ಸುಗಂಧವನ್ನಷ್ಪೇ ಹೊಂದುವುದು ಇಲ್ಲಿ ಮುಖ್ಯವಾಗಿದ್ದು, ಇದನ್ನು ಕೊಯ್ಯುವ ಸೂಕ್ಷ್ಮವ ಬಲ್ಲವರು ಉಂಟೇ? ಎಂದು ಪ್ರಶ್ನೆ ಮಾಡುತ್ತಲೇ ಅಮೂರ್ತ ನೆಲೆಯ ಸತ್ಯದತ್ತ ನಮ್ಮ ಗಮನವನ್ನ ಸೆಳೆಯುವ ವಚನಕಾರರು ಇಲ್ಲಿ ಅಲೌಕಿಕದ ನೆಲೆ ಯ ಅನುಭಾವದತ್ತಲೂ ಗಮನ ಸೆಳೆಯುತ್ತಾರೆ.

ಹಾಗೆಯೇ ಮಾತಿನ ಮರ್ಮದ ಕುರಿತಂತೆಯೂ ಹೇಳುವ ಶರಣರು; ಮಾತನಾಡುವವರು ಬರೀ ಮಾತಿನ ಅರ್ಥವನ್ನ ಮಾತ್ರ ತಿಳಿದು ಮಾತಾಡಿದ್ರೆ ಸಾಲದು ಆ ಮಾತಿನ ಮತಿತಾರ್ಥವನ್ನು ಅಂದರೆ ಅದರ ಧ್ವನಿ ಶಕ್ತಿಯ ತಿಳಿದು ಆಡುವವರುಂಟೇ? ಎಂದು ಪ್ರಶ್ನೆ ಕೇಳುವ ಮೂಲಕ ಕಣ್ಣಿಗೆ ಕಾಣುವ ಚೆಲುವು ಹಾಗೂ ಮೂಗಿಗೆ ದಕ್ಕುವ ಅಲ್ಹಾದಕರ ಆನಂದದ ಆ ಮಹತ್ವದ ಬಗ್ಗೆ ಅರಿತು ಕೊಂಡು ಹಾಗೆಯೇ ಕಿವಿ ಕೇಳಿದ್ದರಿಂದ ಆಗುವ ಅರ್ಥದ ಆಚೆಗಿನ ಧ್ವನಿಯ ಶಕ್ತಿಯನ್ನು ಅರಿತು ಕೊಳ್ಳುವ ಅಗತ್ಯವಿದೆ ಎನ್ನುವರು.

*ಇದು ನೀತಿಯ ಒದಗು, ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವ ಶುದ್ಧವಾಗಿರಬೇಕು.

ಈ ಸೂಕ್ಷ್ಮಗಳಾದ ಹೂ ಹರಿಯದೇ ಗಂಧವನ್ನು ಕೊಯ್ಯುವ ನೈತಿಕತೆಯ ನೆಲೆ ಮತ್ತು ಮಾತನ್ನು ಅರ್ಥದಾಚೆಗಿನ ಧ್ವನಿಶಕ್ತಿಯನ್ನು ತಿಳಿದುಕೊಂಡು ಆಡುವಲ್ಲಿ ಭಾವ ಶುದ್ಧತೆ ಇರಬೇಕೆನ್ನುತ್ತಾರೆ ಇಲ್ಲಿ ವಚನಕಾರ ಸಗರದ ಬೊಮ್ಮಣ್ಣ ಶರಣರು.

*ಮಾತನರಿದಾಡುವಲ್ಲಿ,* *ಮಾತಿನ ರೀತಿಗೆ*

*ತಾ ಒದಗು ನಿಹಿತವಾಗಿರ ಬೇಕು.*

*ಅದು ಕೂಟಸ್ಥ,* *ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.*

'ಮಾತು ಬಲ್ಲವಗೆ ಜಗಳವಿಲ್ಲ'ಎನ್ನುವ ಜನಪದರ ಮಾತಿನ ಮರ್ಮವನ್ನು ವಚನಕಾರರು ಇಲ್ಲಿ ಎತ್ತಿ ಹಿಡಿದು ಮಾತಿನಂತೆ ತಾ ನಡೆದುಕೊಳ್ಳಬೇಕೆಂದು ಅನ್ನುವರು. ಆ ನುಡಿ ಮತ್ತು ನಡೆಯ ಸಾಂಗತ್ಯದ ಸತ್ಯ ಹೇಗಿದೆ ಅಂದ್ರೆ, ಅದು 'ಪರಾತ್ಪರ ಚಿನ್ಮಯ ಶಕ್ತಿಯನ್ನು ಒಡಗೂಡುವ ಚಿನ್ಮನದ ಚಿದ್ವಿಲಾಸದ ಕೂಟಸ್ಥದಂತೆ! ಎಂದು ಹೇಳುವ ಮೂಲಕ ಇಲ್ಲಿ ನಡೆ ನುಡಿ ತತ್ವಗಳ ಸಾಂಗತ್ಯದ ಆ ಮಹತ್ವವನ್ನು ಮತ್ತು ಅದರ ಸತ್ವಯುತ ಶಕ್ತಿಯ ಘನತೆಯನ್ನು ಕುರಿತು ಸಗರದ ಬೊಮ್ಮಣ್ಣ ಶರಣರು ಪ್ರಸ್ತುತ ವಚನದಲ್ಲಿ ಚಿತ್ತಾಕರ್ಷಕ ಕಾವ್ಯಮಯವಾದಂಥ ಆಪ್ತ ಶೈಲಿಯಲ್ಲಿ ಹೇಳಿದ್ದಾರೆಂದು ಅನಿಸುತ್ತದೆ.

ಸಂಕ್ಷಿಪ್ತ ಪರಿಚಯ

ಸಾಂದರ್ಭಿಕ ಚಿತ್ರ, ಮಾಹಿತಿ ಅಂತರ್ಜಾಲ ಕೃಪೆ

೧೨ನೇ ಶತಮಾನದ ಸಗರದ ಬೊಮ್ಮಣ್ಣ ಶರಣ ಗುಲಬರ್ಗಾ ಜಿಲ್ಲೆಯ ಸಗರ ಗ್ರಾಮದವರು. ಪತ್ನಿ ಹೆಸರು ಶಿವದೇವಿ.ಗಣಾಚಾರ ಪ್ರವೃತ್ತಿಯ ಶರಣ ಕಾಯಕ ಇವರದು. ಶಿವನಲ್ಲದೆ ಅನ್ಯದೈವವಿಲ್ಲವೆ ನ್ನುವ ವೀರ ನಿಷ್ಠೆಯವರು. ಹಾಗಾಗಿ ಸಂದರ್ಭ ವೊಂದರಲ್ಲಿವರು ಜೈನರೊಡನೆ ಹೋರಾಡಿ ಶಿವ ಪಾರಮ್ಯವ ಮೆರೆಯುವರೆಂದು ಹೇಳಲಾಗುತ್ತದೆ ಅನುಭವ ಮಂಟಪದ ೭೭೦ ಅಮರ ಗಣಂಗಳ ಪೈಕಿ ಇವರೊಬ್ಬ ವಚನಕಾರ ಶರಣ.'ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ' ಅಂಕಿತದಲ್ಲಿ ಇವರು ರಚಿಸಿದ ೯೧ ವಚನಗಳು ದೊರಕಿವೆ. ಈ ವಚನಗಳು ಕಾವ್ಯಮಯ ಬೆಡಗು ಪ್ರಧಾನವಾಗಿವೆ. ಭಕ್ತಿಯಮಹತ್ವ, ದೈವಾನುಗ್ರಹ ಮಾನವ ಜನ್ಮದ ಹಿರಿಮೆಯನ್ನು ಒಳಗೊಂಡಿವೆ. ಅವುಗಳಲ್ಲಿ ತಾತ್ವಿಕತೆಗೆ ಹೆಚ್ಚಿನ ಆದ್ಯತೆ ಕಂಡು ಬ ರುತ್ತದೆ. ಅವರು ತಮ್ಮ ಒಂದು ವಚನದಲ್ಲಿ; ವಿಷ ಕೊಲುವಲ್ಲಿ, ಹಾವೇನ ಮಾಡುವುದು? ತನ್ನ ಇಂದ್ರಿಯ ತನ್ನ ತಿಂಬಲ್ಲಿ, ವಸ್ತು(ದೇವರ) ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ, ಎಂದು ಹೇಳುವರು. ಜೀವನದಲ್ಲಿ ಸೋಲು ಗೆಲುವುಗಳ ಬಗ್ಗೆ ಬಲ್ಲವರು ತಲೆ ಕೆಡಿಸಿಕೊಳ್ಳಬಾರದು. ಹಾಗೆ ಚಿಂತೆ ಮಾಡುವುದು ಮೂರ್ಖರ (ಬೆಳ್ಳರ) ಗುಣ. ಸರಿ ದಾರಿಯ ಹಿಡಿದು ಎಲ್ಲರೊಡನೆ ಒಂದಾಗಿ ಸಾಗಬೇಕು, ಯಾವ ವಿಷಯದಲ್ಲೂ ಮುಳುಗಿ ಕಳೆದು ಹೋಗಬಾರದು. ಎಲ್ಲವನ್ನೂ ಅರಿತು ನಡೆಯಬೇಕು, ಕಳೆದುಹೋದ ಕಾಲದ ಚಿಂತೆಯ ಲ್ಲಿ ಮುಳುಗದೇನೇ ಅದಕ್ಕೆ ಅತೀತನಾಗಿರಬೇಕು, ಇದು ಬದುಕುವ ದಾರಿ ಎನ್ನುತ್ತಾರೆ ಬೊಮ್ಮಣ್ಣ ಶರಣರು. ಇವರ ಬಗ್ಗೆ ಮತ್ಯಾವುದೇ ವಿವರಗಳು ಲಭ್ಯವಿಲ್ಲ.

             ಅಳಗುಂಡಿ ಅಂದಾನಯ್ಯ