ಹೈದರಾಬಾದ್ ಕರ್ನಾಟಕ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಇನ್ನಿಲ್ಲ

ಹೈದರಾಬಾದ್ ಕರ್ನಾಟಕ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಇನ್ನಿಲ್ಲ

ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವಪ್ಪ ಕಡೇಚೂರ್ ವಿಧಿವಶ

ಕಲಬುರಗಿ: ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿಜೆಪಿಯ ಹಿರಿಯ ಮುಖಂಡರಾದ ಮಹಾದೇವಪ್ಪ ಕಡೇಚೂರ್ ಬುಧವಾರ ಮುಂಜಾನೆ (ಜೂನ್ 24) ಕಲಬುರಗಿಯ ಜಗತ್ ನ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ಅವರಿಗೆ 95 ವರ್ಷ ವಯಸ್ಸಾಗಿತ್ತು. 

   ಮಹಾದೇವಪ್ಪ ಕಡೇಚೂರ್ ಅವರು ಕೆಲದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇವರ ಪತ್ನಿ ಶ್ರೀಮತಿ ಬಾಲಮ್ಮ ಇತ್ತೀಚೆಗೆ (ಮಾರ್ಚ್ ಐದರಂದು) ನಿಧನ ಹೊಂದಿದ್ದರು.

 ಐದು ಜನ ಗಂಡು ಮಕ್ಕಳು ಹಾಗೂ ಒಬ್ಬಳು ಪುತ್ರಿಯನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಮಂಗಳವಾರ ಸಾಯಂಕಾಲ 5 ಗಂಟೆಗೆ ಕಲಬುರಗಿ ನಗರದ ವೀರೇಶ್ ನಗರದ ಸ್ವಂತ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

    ಮಹಾದೇವಪ್ಪ ಕಡೇಚೂರ್ ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯ ಸೋಪಯ್ಯ _ ಆಶಮ್ಮ ದಂಪತಿಗಳ ಸುಪುತ್ರ. 1930. ಮೇ 9ರಂದು ಜನಿಸಿದ ಇವರು ಹಿಂದಿಯಲ್ಲಿ ಎಂಎ,ಬಿಎಡ್ ಹಾಗೂ ಹೋಮಿಯೋಪತಿಯಲ್ಲಿ ಎಂ ಐ ಎಚ್ ಪದವಿ ಪಡೆದವರು. ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರಾಗಿ ಹಾಗೂ ಶಿಕ್ಷಕ ಪತ್ರಕರ್ತ, ಉದ್ಯಮಿ, ಸಮಾಜ ಸೇವಕರಾಗಿ ಸೇವೆ ಸಲ್ಲಿಸಿದವರು. 1951 ರಿಂದ ರಾಷ್ಟ್ರೀಯ ಸ್ವಯಂಸೇವಕರಾಗಿ (ಆರೆಸ್ಸೆಸ್), ವಿಶ್ವ ಹಿಂದು ಪರಿಷತ್ ಮತ್ತು ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯರಾಗಿ ಕಲಬುರಗಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರು. ಕಲಬುರಗಿ ಜಿಲ್ಲಾ ಬಿಜೆಪಿಯ ಕೋಶಾಧ್ಯಕ್ಷರಾಗಿ, ಆರ್ಯ ಸಮಾಜದ ಜಿಲ್ಲಾಧ್ಯಕ್ಷರಾಗಿ ಕಲಬುರಗಿಯ ಸಾಂದೀಪನಿ ಶಾಲೆಯ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ, ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಕಾರ್ಯದರ್ಶಿಯಾಗಿ, ಕಲಬುರ್ಗಿ ನಗರದ ಹೊರವಲಯದಲ್ಲಿ ಆರಂಭಿಸಿದ ದೀನ ದಯಾಳ್ ಉಪಾಧ್ಯಾಯ ನಗರದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಹಿಂದಿ ಶಿಕ್ಷಕರಾಗಿ ಕುಷ್ಟಗಿ, ಯಲಬುರ್ಗಾ, ಸಿಂಧನೂರು ಹಾಗೂ ರಾಯಚೂರು ಜಿಲ್ಲೆಯ ಗುಂಜಳ್ಳಿ ಶಾಲೆಗಳಲ್ಲಿ ಅಧ್ಯಾಪಕರಾಗಿ ದುಡಿದಿದ್ದರು. ನಂತರ ಕಲಬುರಗಿಯ ಎಸ್ ಟಿ ಬಿ ಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಅಬಕಾರಿ ಗುತ್ತಿಗೆದಾರರಾಗಿ ಮತ್ತು ಹಣಕಾಸು ಸಂಸ್ಥೆಯ ಪಾಲುದಾರರಾಗಿ ಉದ್ಯಮ ರಂಗದಲ್ಲಿ ತೊಡಗಿದ್ದರು. ಅನೇಕ ವರ್ಷ "ಕಲಬುರ್ಗಿ ಕಹಳೆ" ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ನಾಡಿನ ಪ್ರಖ್ಯಾತ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಉತ್ತಮ ಲೇಖಕರಾಗಿ ಗುರುತಿಸಿಕೊಂಡಿದ್ದರು. ಇವರು ವೆಂಕಯ್ಯ ಗುತ್ತೇದಾರರ ಜೀವನ ಚರಿತ್ರೆ ಕಣ್ಮಣಿ, ಬೆನ್ನ ಬೆಳಕು, ಗುರು ಸ್ಮರಣೆ, ಸ್ನೇಹ ಸರಪಳಿ, ಅಂದಿನ ನನ್ನ ಊರು ಮತ್ತು ಬದುಕು, ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರು, ಹಾಥೀಂ ತಾಯಿ ಉರ್ದು ಅನುವಾದ, ಕಲಬುರಗಿಯಲ್ಲಿ ಜನಸಂಘ ಕಟ್ಟಿ ಬೆಳೆಸಿದವರು ಮುಂತಾದ ಸುಮಾರು ಹತ್ತು ಕೃತಿಗಳನ್ನು ಸಾಹಿತ್ಯ ಮಡಿಲಿಗೆ ಹಾಕಿದ್ದಾರೆ. ಇವರ ಕುರಿತಾಗಿ "ಅನನ್ಯ ಮಹಾದೇವ ಅಭಿನಂದನ ಗ್ರಂಥ"ವನ್ನು ಹೊರತರಲಾಗಿದೆ. 2022 ರಲ್ಲಿ ಕರ್ನಾಟಕ ರಾಜ್ಯ ಸರಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ "ಬೆನ್ನ ಬೆಳಕು"ಕೃತಿಗೆ ಮಾಜಿ ರಾಷ್ಟ್ರಪತಿ ದಿವಂಗತ ಎ. ಪಿ. ಜೆ ಅಬ್ದುಲ್ ಕಲಾಂ ಅವರಿಂದ ಪ್ರಸಂಶಾ ಪತ್ರ ಲಭಿಸಿದೆ. ಬೆನ್ನ ಬೆಳಕು ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಅತ್ಯುತ್ತಮ ಕೃತಿ ಪುರಸ್ಕಾರ ಲಭಿಸಿದ್ದು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಧರ್ಮಸಿಂಗ್ ಹಾಗೂ ಖ್ಯಾತ ಸಂಶೋಧಕರಾದ ಡಾ. ಚಿದಾನಂದಮೂರ್ತಿ ಅವರಿಂದ ಪ್ರಶಸ್ತಿ ಪಡೆದಿದ್ದರು. ಸುರಪುರ ಸಂಸ್ಥಾನದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಆರ್ ಎಸ್ ಎಸ್ ನ ಸು.ರಾಮಣ್ಣ ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಪ್ರಮೋದ್ ಮಹಾಜನ್, ಕೆ ಎನ್ ಗೋವಿಂದಾಚಾರ್ಯ, ಅನಂತಕುಮಾರ್, ಡಾ. ಎಂ ಆರ್ ತಂಗಾ, ಬಸವರಾಜ ಪಾಟೀಲ್ ಸೇಡಂ, ಬಿ.ಎಸ್ ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಕೆ. ಎಸ್ ಈಶ್ವರಪ್ಪ, ಡಿ . ಎ ಚಿಲ್ಲಾಳ, ಮಹಾಂತಗೌಡ ಮುಂತಾದವರ ಜೊತೆ ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದರು. ಎಲ್. ಕೆ ಅಡ್ವಾಣಿ, ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ನಿಕಟ ಸಂಬಂಧ ಹೊಂದಿದ್ದರು.

ಮಹಾದೇವಪ್ಪ ಕಡೇಚೂರ್ ಆದರ್ಶದ ಬದುಕು ಮಾಡಿ ಸುಮಾರು 29 ಜನರನ್ನು ಹೊಂದಿದ ಅವಿಭಕ್ತ ಕುಟುಂಬದ ಮುಖ್ಯಸ್ಥರಾಗಿದ್ದರು.

        ಇವರ ಮಕ್ಕಳಲ್ಲಿ ವೆಂಕಟೇಶ ಕಡೇಚೂರ್, ಮಹೇಶ್ ಕಡೇಚೂರ್, ದಿನೇಶ್ ಕಡೇಚೂರ್ ಉದ್ಯಮಿಗಳಾಗಿದ್ದು ಡಾ. ರಾಜೇಶ್ ಕಡೇಚೂರ್ ವೈದ್ಯರು. ಏಕೈಕ ಪುತ್ರಿ ಪ್ರಮೀಳಾ ಎಂ.ಕೆ ಅವರು ಕೆಎಎಸ್ ಆಯ್ಕೆ ಶ್ರೇಣಿಯ ಅಧಿಕಾರಿಯಾಗಿದ್ದು ಪ್ರಸ್ತುತ ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾ ರೆ. ಅಳಿಯ ಡಾ. ಸದಾನಂದ ಪೆರ್ಲ ಕಲಬುರಗಿ ಆಕಾಶವಾಣಿ ಕೇಂದ್ರದ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರು.