ಡಾ. ಅಜಯ್ ಸಿಂಗ್: ಸಚಿವ ಸ್ಥಾನಕ್ಕಾಗಿಯೇ ಕನಸು

ಡಾ. ಅಜಯ್ ಸಿಂಗ್: ಸಚಿವ ಸ್ಥಾನಕ್ಕಾಗಿಯೇ ಕನಸು,
ಆದರೆ ಕೆಕೆಆರ್ಡಿಬಿ ಅಧ್ಯಕ್ಷ ಸ್ಥಾನವನ್ನು ಜವಾಬ್ದಾರಿಯಾಗಿ ನಿಭಾಯಿಸುತ್ತೇನೆ
ಯಾದಗಿರಿ: "ನಾನು ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತನಾಗಿ, ಯುವ ನಾಯಕರಾಗಿ ಹಾಗೂ ಈಗ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ತಂದೆ, ಮಾಜಿ ಮುಖ್ಯಮಂತ್ರಿ ದಿ. ಧರಂಸಿಂಗ್ ಅವರು ಸ್ಥಾಪಿಸಿದ ಮಾರ್ಗದರ್ಶಕ ಹಾದಿಯಲ್ಲೇ ನಡೆದುಕೊಳ್ಳುತ್ತಿದ್ದೇನೆ" ಎಂದು ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯ್ಸಿಂಗ್ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ *ಆರೋಗ್ಯ ಆವಿಷ್ಕಾರ ಕಾಮಗಾರಿ ಅಡಿಗಲ್ಲು ಸಮಾರಂಭದ* ತಯಾರಿಗಳನ್ನು ವೀಕ್ಷಿಸಲು ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಸಹ ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೆನು. ಮಂತ್ರಿ ಸ್ಥಾನವೆಂಬ ಕನಸು ನನಗೂ ಇದೆ. ನಾನು ಮೂರು ಬಾರಿ ಶಾಸಕನಾಗಿದ್ದು, ಸದಾ ಪಕ್ಷದ ನಿಷ್ಠಾವಂತನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಪಕ್ಷ ನೀಡಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ನನ್ನ ಸಮರ್ಪಿತ ಸೇವೆಗೆ ಒಮ್ಮೆನಾದರೂ ಅವಕಾಶ ಸಿಗಲಿದೆ ಎಂಬ ಭರವಸೆ ನನ್ನಲ್ಲಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು ಮುಂದುವರೆದು, "ರಾಜ್ಯ ಸರ್ಕಾರದ ಕೊಟ್ಟ ಮಾತಿನಂತೆ ಈಗಾಗಲೇ ಕೆಕೆಆರ್ಡಿಬಿಗೆ ₹3500 ಕೋಟಿ ಅನುದಾನ ಬಿಡುಗಡೆ ಆಗಿದೆ. ಪ್ರಜಾಸೌಧ, ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಸೇರಿದಂತೆ ನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಾವಿಂದು ಪೂರಕ ಕೆಲಸ ಮಾಡುತ್ತಿದ್ದೇವೆ" ಎಂದು ವಿವರಿಸಿದರು.