ಗ್ಯಾರಂಟಿ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ: ಮಾಹಿತಿ ಮಳಿಗೆ ಉದ್ಘಾಟಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ

ಗ್ಯಾರಂಟಿ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ:  ಮಾಹಿತಿ ಮಳಿಗೆ ಉದ್ಘಾಟಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ

ಗ್ಯಾರಂಟಿ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ:

ಮಾಹಿತಿ ಮಳಿಗೆ ಉದ್ಘಾಟಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ,ಜೂ.4ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಬಿಂಬಿಸುವ ಮಾಹಿತಿ ಮಳಿಗೆ ಪ್ರದರ್ಶನವನ್ನು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸುವರು. 

ಈ‌ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ನಾಡಿನ 7 ಕೋಟಿ ಜನರ ಬದುಕು ಗಟ್ಟಿಗೊಳಿಸಲು ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಚುನಾವಣೆ ಪೂರ್ವ ನೀಡಿದ ಭರವಸೆಯಂತೆ 5 ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ವಿರೋಧ ಪಕ್ಷಗಳು ಸುಖಾ ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು ವಾಸ್ತಾವಂಶ‌ ನೋಡಿ ಮಾತನಾಡಬೇಕು ಎಂದ ಅವರು, ಈ ಯೋಜನೆಗಳು ನಾಡಿನ ಜನರರಿಗೆ ಭರವಸೆಯ ಬೆಳಕಾಗಿವೆ ಎಂದರು.

ಕಳೆದ ಎರಡು ವರ್ಷದಲ್ಲಿ ಕೃಷಿ, ಆರೋಗ್ಯ, ಮೂಲಸೌಕರ್ಯ, ವಸತಿ ಕ್ಷೇತ್ರದಲ್ಲಿ ಸಾಧನೆ, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸುವಂತೆ ರೈತಾಪಿ ವರ್ಗಕ್ಕೆ ಯೋಜನೆಗಳು, ಹಿಂದುಳಿದದವರ ಕಲ್ಯಾಣ ಸೇರಿದಂತೆ ಸಾಧನೆ ಪ್ರತಿಬಿಂಬ ಹಾಗೂ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗಾದ ಅನುಕೂಲ, ಪಲಾನುಭವಿಗಳ ಅಭಿಪ್ರಾಯ, ಸರ್ಕಾರ ಇದಕ್ಕೆ ಭರಿಸಿದ ಹಣ ಹೀಗೆ ಸಮಗ್ರ ಮಾಹಿತಿಯನ್ನು ಈ ಮಳಿಗೆ ಹೊಂದಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಂದೇಶದೊಂದಿಗೆ ಸಾರ್ಥಕ ಸಂಭ್ರಮದ "ಪ್ರಗತಿಯತ್ತ ಕರ್ನಾಟಕ" ಬಿಂಬಿಸುವ ಈ ಮಾಹಿತಿ ಮಳಿಗೆಗೆ ಸಾರ್ವಜನಿಕರು, ಪ್ರಯಾಣಿಕರು ಭೇಟಿ ನೀಡಿ ವೀಕ್ಷಿಸಬೇಕೆಂದರು.

ಗೃಹ ಲಕ್ಷ್ಮೀ ಹಣ ಸಕಾಲದಲ್ಲಿ ತಲುಪಿತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿ ಮಾಹೆ 2,000 ರೂ.‌ ನೀಡುವುದಾಗಿ ವಾಗ್ದಾನ ಮಾಡಿದ್ದು, ಅದರಂತೆ ಹಣ ಮಹಿಳೆಯರ ಖಾತೆಗೆ ಜಮೆ ಮಾಡಲಾಗುತ್ತದೆ. 10-15 ದಿನ ತಡವಾದರೆ ಯೋಜನೆ ಅಸಫಲ ಎನ್ನುವುದು ತಪ್ಪು. ಅರ್ಥಿಕ ಇತಿಮಿತಿ ನೋಡಿಕೊಂಡು ಸರ್ಕಾರ ಕಾರ್ಯನಿರ್ವಹಿಸಬೇಕಾಗುತ್ತದೆ. ಎರಡು ವರ್ಷ ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ಮುಂದಿನ ಮೂರು ವರ್ಷ ಸಹ ಯೋಜನೆ ಜಾರಿಯಲ್ಲಿರಲಿವೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು.

ಬಸವಣ್ಣನ ತತ್ವದ ಮೇಲೆ ಸರ್ಕಾರ ಕಾರ್ಯನಿರ್ವಹಣೆ:

ರಾಜ್ಯ ಗ್ಯಾರಂಟಿ ಯೋಜನೆ‌ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಮಾತನಾಡಿ, ಬಸವಣ್ಣನವರ ತತ್ವ, ಗಾಂಧೀಜಿಯ ಕನಸು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತದ ಮೇಲೆ ರಾಜ್ಯ ಸರ್ಕಾರ ನಾಡಿನ ಜನರ ಒಳಿತಿಗೆ ಗ್ಯಾರಂಟಿ ಯೋಜನೆಗಳು ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಇಂತಹ ಒಂದು ಅಪೂರ್ವ ಮಾಹಿತಿ ನೀಡುವ ಮಳಿಗೆ ವೀಕ್ಷಣೆಗೆ ಮುಕ್ತವಾಗಿ ಅವಕಾಶ ಮಾಡಿಕೊಟ್ಟ ವಾರ್ತಾ ಇಲಾಖೆಯ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಲಾದ ಪಂಚ ಗ್ಯಾರಂಟಿ ಪ್ರಗತಿ ಕಿರುಹಿತ್ತಿಗೆಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಜೂನ್ 10ರ ವರೆಗೆ ಮಳಿಗೆ ಓಪನ್:

ಇದೇ ಜೂನ್ 4 ರಿಂದ 10ರ ವರೆಗೆ ಮಾಹಿತಿ ಮಲಿಗೆ ಜನರ ವೀಕ್ಷಣೆಗೆ ಮುಕ್ತವಾಗಿರಲಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೂ ಸಾರ್ವಜನಿಕರು, ಪ್ರಯಾಣಿಕರು ವೀಕ್ಷಿಸಬಹುದಾಗಿದೆ.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಉಪಾಧ್ಯಕ್ಷ ಸೋಮಶೇಖರ ಹಿರೇಮಠ, ನರಸಿಂಹಲು, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಕಲಬುರಗಿ ವಿಭಾಗ-2ರ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿ.ಕೆ.ರಾಜರತ್ನ, ರವಿ ಮಿರಸ್ಕರ್, ಉಮಾಶಂಕರ‌ ಚಿನಮಳ್ಳಿ, ಸೈಯದ್ ಇಸ್ಮಾಯಿಲ್ ಪಾಶಾ, ನರಸಿಂಹ, ಅಶೋಕ ಸೇರಿದಂತೆ ಮತ್ತಿತರರು ಇದ್ದರು.