ಅರಿವು ಕೇಂದ್ರದಿಂದ ಕೆಸಿಇಟಿ ಯಶಸ್ಸು: ವಿನಿಶಾ ಡಿಸೋಜ ಸಾಧನೆಯ ಮೆರುಗು
ಅರಿವು ಕೇಂದ್ರದಿಂದ ಕೆಸಿಇಟಿ ಯಶಸ್ಸು: ವಿನಿಶಾ ಡಿಸೋಜ ಸಾಧನೆಯ ಮೆರುಗು
ಉಡುಪಿ: “ಜನತೆಗೆ ಅನ್ನ ಹಾಗೂ ಜ್ಞಾನ ಒದಗಿಸಿದಾಗ ಸಮಾಜವು ಪ್ರಗತಿಯತ್ತ ಸಾಗುತ್ತದೆ” ಎಂಬ ಬಸವಾದಿ ಶರಣರ ದಾಸೋಹ ತತ್ವವನ್ನು ನೆನಪಿಸಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ ಅವರು, ಗ್ರಾಮೀಣ ಅರಿವು ಕೇಂದ್ರಗಳ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧಿಸುತ್ತಿರುವ ಯಶಸ್ಸುಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ರಹ್ಮಾವರ ತಾಲೂಕು ಹಾವಂಜೆ ಗ್ರಾಮಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿನಿ ವಿನಿಶಾ ಡಿಸೋಜ, ಸ್ಥಳೀಯ ಅರಿವು ಕೇಂದ್ರದಲ್ಲಿ ಅಧ್ಯಯನ ಮಾಡಿ ಈ ವರ್ಷ ಕೆಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿ ತಾವು ಹೊಮ್ಮಿದ ಗ್ರಾಮಕ್ಕೆ ಹೆಮ್ಮೆ ತಂದಿದ್ದಾಳೆ.
ಈ ಬಗ್ಗೆ ಮಾತನಾಡಿದ ಸಚಿವರು, “ಡಿಜಿಟಲ್ ಪರಿಕರಗಳು ಮತ್ತು ಹೊಸ ಪುಸ್ತಕಗಳ ಮೂಲಕ ಪುನರುಜ್ಜೀವನಗೊಂಡಿರುವ ಗ್ರಾಮೀಣ ಅರಿವು ಕೇಂದ್ರಗಳು ಈಗ ಹಳ್ಳಿಗಳಲ್ಲಿ ಜ್ಞಾನ ಚಿಲುಮೆಯಾಗಿವೆ. ಈ ಕೇಂದ್ರಗಳ ಸಹಾಯದಿಂದ ಹಲವರು ಉದ್ಯೋಗ ಪಡೆಯುತ್ತಿದ್ದಾರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲ್ಲುತ್ತಿದ್ದಾರೆ. ವಿನಿಶಾ ಡಿಸೋಜ ಅವರ ಸಾಧನೆಯು ಈ ಯಶಸ್ಸಿನ ಕಥೆಗಳಿಗೆ ಇನ್ನೊಂದು ಶ್ರೇಣಿಯ ಸೇರ್ಪಡೆಯಾಗಿದೆ” ಎಂದು ಹೇಳಿದರು.
ವಿನಿಶಾ ಅವರ ಭವಿಷ್ಯದ ಶೈಕ್ಷಣಿಕ ಜೀವನಕ್ಕೆ ಶುಭ ಕೋರಿದ ಸಚಿವರು, “ಅರಿವು ಕೇಂದ್ರಗಳು ಇನ್ನಷ್ಟು ಜನರಿಗೆ ಜ್ಞಾನವನ್ನೀಡಿ, ಪ್ರಜ್ಞೆಯ ಬೆಳಕು ಹರಡಲಿ” ಎಂದು ಆಶಿಸಿದರು.