ಚಿಂಚೋಳಿ ಬಿರುಗಾಳಿಗೆ ಒಳಾಂಗಣ ಕ್ರೀಡಾಂಗಣ ಕುಸಿತ ತಜ್ಞರ ಪರಿಶೀಲನೆ
ಬಿರುಗಾಳಿ ರಭಸಕ್ಕೆ ಕುಸಿದಿರುವ ಒಳಾಂಗಣ ಕ್ರೀಡಾಂಗಣಕ್ಕೆ ತಾಂತ್ರಿಕ ತಜ್ಞರ ಭೇಟಿ : ಪರಿಶೀಲನೆ
ಮೇಲ್ನೋಟಕ್ಕೆ ಅಂದಾಜು ಒಟ್ಟು 60 ಲಕ್ಷ ರು ಮೌಲ್ಯ ಹಾನಿ| ಸಂಪೂರ್ಣ ವರದಿ ಇಲಾಖೆಗೆ ಸಲ್ಲಿಸಲಾಗುವುದು : ತಜ್ಞರ ತಂಡ
ಚಿಂಚೋಳಿ : ಕಳೆದ ಒಂದು ವಾರದ ಹಿಂದೆ ಬಿರುಗಾಳಿ ರಭಸಕ್ಕೆ ಚಿಂಚೋಳಿ ಪುರಸಭೆ ವ್ಯಾಪ್ತಿಯ ಒಳಾಂಗಣ ಕ್ರೀಡಾಂಗಣದ ಮೇಲ್ಚಾವಣಿ ಹಾಸು ಪತ್ರ (ಟಿನ್) ಗಳು ಹಾರಿ, ನಿರ್ಮಾಣಗೊಂಡ ಕಟ್ಟಡ ಕುಸಿದು ನೆಲಕ್ಕೆ ಉರುಳಿತ್ತು. ಕೆಕೆಆರ್ ಡಿಬಿ ಯೋಜನೆಯ 2 ಕೋಟಿ 51 ಲಕ್ಷ ರು ಎರಡು ಹಂತದ ಅನುದಾನದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಸಂಸ್ಥೆ ನಿರ್ಮಿಸಿದ ಒಳಾಂಗಣ ಕ್ರೀಡಾಂಗಣ ಸಂಪೂರ್ಣವಾಗಿ ಸಂಪೂರ್ಣ ಕಳಪೆ ಮಟ್ಟದಲ್ಲಿ ನಿರ್ಮಾಣಗೊಂಡಿದ್ದರಿಂದ ಕುಸಿದು ಬಿಳಲು ಕಾರಣವಾಗಿದೆ ಎಂದು ಸ್ಥಳೀಯ ಜನಪ್ರತಿನಿಧಿ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮುಖಂಡರು ಆರೋಪಿಸಿ, ಕೂಡಲೇ ತನಿಖೆ ನಡೆಸಿ, ಸರಕಾರ ಕ್ರಮಕೈಗೊಳಬೇಕೆಂದು ಆಗ್ರಹಿಸಿದರ ಹಿನ್ನಲೆಯಲ್ಲಿ ಶುಕ್ರವಾರ ಗುಣಮಟ್ಟ ಪರಿಶೀಲನೆ ನಡೆಸುವ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಒಟ್ಟು 60 ಲಕ್ಷ ರು ಹಾನಿ ಆಗಿರುವ ಅಂದಾಜು :
ಪಟ್ಟಣದ ಒಳಾಂಗಣ ಕ್ರೀಡಾಂಗಣ ಕುಸಿದು ಬಿದ್ದ ಹಿನ್ನಲೆಯಲ್ಲಿ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ತಜ್ಞರ ತಂಡ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿತ್ತು. ನಕ್ಷೆಯಂತೆ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಕಟ್ಟಡದ ಕಾಲಂಗಳ ಜೋಡಣೆ ಸರಿಯಾದ ಕ್ರಮದಲ್ಲಿ ಆಗದೇ ಇರುವುದರಿಂದ ಕಟ್ಟಡ ಕುಸಿಯಲು ಕಾರಣವಾಗಿದೆ. ಸರಕಾರಕ್ಕೆ ಒಟ್ಟು 60 ಲಕ್ಷ ರು. ಹಾನಿ ಆಗಿರುವ ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಂಪೂರ್ಣವಾದ ಮಾಹಿತಿ ಇಲಾಖೆಗೆ ಒದಗಿಸಲಾಗುತ್ತದೆ ಎಂದು ಕಟ್ಟಡ ವಿಕ್ಷಣೆಗೆ ಆಗಮಿಸಿದ ಶರಣ ಬಸವೇಶ್ವರ ವಿಶ್ವವಿದ್ಯಾಲಯದ ತಂತ್ರಜ್ಞಾನದ ತಜ್ಞ ಸಿದ್ರಾಮಪ್ಪ ಆವಂಟಿ, ಗಜೇಂದ್ರ, ಕೆ.ಆರ್.ಐ.ಡಿ.ಎಲ್ ರಾಜಣ್ಣ, ಇಂಜಿನೀಯರ ತಿಮ್ಮರಾಜಪ್ಪ, ರಾಹುಲ್ ಕಾಂಬಳೆ ಅವರ ತಂಡ ತಿಳಿಸಿದೆ.
1.20 ಲಕ್ಷ ರು ಮೌಲ್ಯದ ಸಾಮಗ್ರಿಗಳು ಕಳ್ಳತನ, ಪ್ರಕರಣ ದಾಖಲು :
ಒಳಾಂಗಣ ಕ್ರಿಡಾಂಗಣದ ಕಟ್ಟಡ ನೆಲಕ್ಕೆ ಉರುಳಿದ ಪರಿಣಾಮ ಕ್ರೀಡಾಂಗಣದಲ್ಲಿನ 19 ಫ್ಯಾನ್, ಪೋಲ್, ಟೂಬ್ ಲೈಟ್, ನಟ್-ಬಾಲುಗಳು ಸೇರಿ ಒಟ್ಟು 1.20 ಲಕ್ಷ ರು ಮೌಲ್ಯದ ಸಾಮಗ್ರಿಗಳು ಕಳ್ಳತನವಾಗಿವೆ ಎಂದು ಕ್ರೀಡಾಂಗಣದ ವ್ಯವಸ್ಥಾಪಕ ಮಲ್ಲಿಕಾರ್ಜುನ ನೆಲ್ಲಿ ಅವರು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.