ಜಾತಿ ಲೆಕ್ಕದಲ್ಲಿ ಲಿಂಗಾಯತ್, ಒಕ್ಕಲಿಗರ ಅಸಮಾಧಾನಕ್ಕೆ ಕಾರಣವೇನು?

ಜಾತಿ ಲೆಕ್ಕದಲ್ಲಿ ಲಿಂಗಾಯತ್, ಒಕ್ಕಲಿಗರ ಅಸಮಾಧಾನಕ್ಕೆ ಕಾರಣವೇನು?
ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯ ವರದಿಯು ಇದೀಗ ರಾಜ್ಯ ರಾಜಕೀಯದ ಮತ್ತು ಸಾಮಾಜಿಕ ವಲಯದ ಚರ್ಚೆಯ ಕೇಂದ್ರ ಬಿಂದುವಾಗಿದೆ. “ದತ್ತಾಂಶಗಳ ಅಧ್ಯಯನ” ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾದ ಈ ವರದಿ, ಜಾತಿಯೊಂದರ ಎಲ್ಲಾ ಉಪಜಾತಿಗಳನ್ನು ಅದರ ಮುಖ್ಯ ಜಾತಿಯ ಅಡಿಯಲ್ಲಿ ಸೇರಿಸಿ ವರ್ಗೀಕರಣ ಮಾಡಿರುವುದರಿಂದ, ಲಿಂಗಾಯತ್ ಮತ್ತು ಒಕ್ಕಲಿಗ ಸಮುದಾಯಗಳು ತಮ್ಮ ಜನಸಂಖ್ಯೆ ತಗ್ಗಿಹೋಗಿದೆ ಎಂಬ ಆಕ್ಷೇಪವನ್ನು ಹೊರ ಹಾಕಿವೆ.
ಲಿಂಗಾಯತ್: ಉಪಜಾತಿಗಳ ವಿರಳ ಲೆಕ್ಕಾಚಾರ?
ಆಯೋಗದ ವರದಿಯ ಪ್ರಕಾರ, ವೀರಶೈವ ಲಿಂಗಾಯತ ಜನಸಂಖ್ಯೆ 10.49 ಲಕ್ಷವಾಗಿದೆ. ಆದರೆ ಲಿಂಗಾಯತ ಸಮುದಾಯವು ಹಲವು ಉಪ ಗುಂಪುಗಳನ್ನು ಒಳಗೊಂಡಿದ್ದು, ಜಂಗಮ, ಪಂಚಮಸಾಲಿ, ಆದಿ ಬಣಜಿಗ, ಲಿಂಗವಂತ ಮುಂತಾದ 95 ಉಪ ಗುಂಪುಗಳ ಲೆಕ್ಕ ಸೇರಿಸಿದರೆ ಜನಸಂಖ್ಯೆ 76.84 ಲಕ್ಷವಾಗುತ್ತದೆ ಎಂಬುದು ಲಿಂಗಾಯತ ನಾಯಕರ ವಾದ. ಇವರ ವಾದ ಪ್ರಕಾರ, ಹಲವಾರು ಉಪಜಾತಿಗಳನ್ನು ಸರಿಯಾಗಿ ಸೇರಿಸದಿದ್ದರಿಂದ ಲಿಂಗಾಯತ ಸಮುದಾಯದ ಗಾತ್ರವನ್ನು ಸಮೀಕ್ಷೆಯಲ್ಲಿ ತಗ್ಗಿಸಲಾಗಿದೆಯೆಂದು ಅನುಮಾನ ವ್ಯಕ್ತವಾಗಿದೆ.
ಒಕ್ಕಲಿಗ: ಗೌಡರಿಂದ ರೆಡ್ಡಿವರೆಗೆ – ಲೆಕ್ಕದ ಚುಟುಕುಗಳು
ಒಕ್ಕಲಿಗ ಸಮುದಾಯವೂ ಇದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿದೆ. ವಾಸ್ತವವಾಗಿ, 40.04 ಲಕ್ಷ ಜನಸಂಖ್ಯೆ ಉಳ್ಳ ಒಕ್ಕಲಿಗ ಸಮುದಾಯದ ಒಳಗೆ 47 ಜಾತಿಗಳನ್ನು (ಗೌಡ, ರೆಡ್ಡಿ, ಕುಂಚಿಟಿಗ, ವಕ್ಕಲಿಗ ಮುಂತಾದ) ಸೇರಿಸಿದರೆ ಈ ಸಂಖ್ಯೆಯು 61.58 ಲಕ್ಷಕ್ಕೆ ಏರುತ್ತದೆ. ಆದರೆ ಉಪಪಂಗಡಗಳ ಪರಿಶೀಲನೆ ಇಲ್ಲದ ಸಮೀಕ್ಷೆ ತಾವು ಅನುಭವಿಸುವ ಸಮಾಜದ ಪ್ರಾಬಲ್ಯವನ್ನೂ ತಗ್ಗಿಸಿದೆ ಎಂಬ ಕೋಪ ಒಕ್ಕಲಿಗರಿಗೆ.
ಕುರುಬ: ಹೊಸ ಪ್ರವರ್ಗದಲ್ಲಿ ಸೇರಿಕೆ
ಆಯೋಗವು ‘ಅತ್ಯಂತ ಹಿಂದುಳಿದ’ ಎಂದು ಗುರುತಿಸಿ ಕುರುಬ ಸಮುದಾಯವನ್ನು ‘ಪ್ರವರ್ಗ 1ಬಿ’ಯಲ್ಲಿ ಸೇರಿಸಿದೆ. ಇವು ಹಾಲುಮತ, ಕುರಬ್ ಮುಂತಾದ 11 ಜಾತಿಗಳನ್ನು ಒಳಗೊಂಡಿದ್ದು, ಒಟ್ಟು ಜನಸಂಖ್ಯೆ 43.72 ಲಕ್ಷವಾಗಿದೆ.
ಆಯೋಗದ ಸಮರ್ಥನೆ: ಸಮಾನ ಸ್ವಭಾವ, ಒಂದೇ ವರ್ಗೀಕರಣ
ಆಯೋಗವು ತನ್ನ ವರದಿಯಲ್ಲಿ ನೀಡಿರುವ ಸಮರ್ಥನೆಯ ಪ್ರಕಾರ, ‘ಒಂದು ಜಾತಿಯ ಉಪಜಾತಿಗಳ ಆಚಾರ, ಸಂಸ್ಕೃತಿ, ಕುಲಕಸುಬು, ಸಂಬಂಧಗಳು ಸಾಮಾನ್ಯವಾಗಿದ್ದು, ಅವುಗಳನ್ನು ಪ್ರತ್ಯೇಕಿಸುವುದು ಅಸಾಧ್ಯ. ಈ ಕಾರಣದಿಂದ, ಎಲ್ಲ ಉಪಜಾತಿಗಳನ್ನು ಸಂಬಂಧಿಸಿದ ಮುಖ್ಯ ಜಾತಿಯ ಅಡಿಯಲ್ಲಿ ಸೇರಿಸಲಾಗಿದೆ’.
ಅಲ್ಲದೆ, ಕೆಲ ಜಾತಿಗಳು ಪಡೆದ ಶೈಕ್ಷಣಿಕ, ಸಾಮಾಜಿಕ ಅಂಕಗಳ ಆಧಾರದ ಮೇಲೆ ಬದಲಾವಣೆ ಮಾಡಿದರೂ, ಅವುಗಳ ಅಸ್ಮಿತೆಗೆ ಧಕ್ಕೆಯಾಗಬಾರದು ಎಂಬ ದೃಷ್ಟಿಯಿಂದ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನಿರ್ಣಾಯಕ ಪ್ರಶ್ನೆ: ಸರಿಯಾದ ಪ್ರತಿಬಿಂಬವೇ?
ಇದೀಗ ಉದ್ಭವಿಸುತ್ತಿರುವ ಪ್ರಮುಖ ಪ್ರಶ್ನೆ ಎಂದರೆ – ಈ ವರದಿ ನಿಜಕ್ಕೂ ಸಮುದಾಯಗಳ ಹಕ್ಕು ಮತ್ತು ಅಸ್ತಿತ್ವವನ್ನು ಸಮರ್ಪಕವಾಗಿ ಪ್ರತಿಬಿಂಬಿಸುತ್ತಿದೆಯೇ? ಲಿಂಗಾಯತ್, ಒಕ್ಕಲಿಗರು ತಮ್ಮ ಉಪಜಾತಿಗಳ ಸಮೀಕ್ಷಾ ಲೆಕ್ಕಾಚಾರದ ಅಸಮರ್ಪಕತೆಯಿಂದ ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತಿರುವುದಾಗಿ ಭಾವಿಸುತ್ತಿರುವ ಈ ಸಮಯದಲ್ಲಿ, ಸರ್ಕಾರ ಮತ್ತು ಆಯೋಗವು ಸ್ಪಷ್ಟನೆ ನೀಡುವುದು ಅವಶ್ಯಕವಾಗಿದೆ.
ಕುರುಬ | ಒಕ್ಕಲಿಗರ | ಲಿಂಗಾಯತ/ವೀರಶೈವ |
ಕುರುಬ,ಜನಸಂಖ್ಯೆ -4271399 | ಒಕ್ಕಲಿಗಸಂಖ್ಯೆ 40,04,830 |
ವೀರಶೈವ ಲಿಂಗಾಯತಸಂಖ್ಯೆ ,-10,49,706 |
ಕುರುಬ ಅಡಿಯಲ್ಲಿ 11, ಜಾತಿಗಳ ಜನಸಂಖ್ಯೆ 1,01,448 |
ಒಕ್ಕ ವಕ್ಕಲಿಗ ಅಡಿಯಲ್ಲಿ 47 ಜಾತಿಗಳ ಸಂಖ್ಯೆ 21,53,522 |
ಲಿಂಗಾಯತ 95 ಉಪ ಪಂಗಡಗಳ ಸಂಖ್ಯೆ -66,35,233 |
ಒಟ್ಟು -43,72,847 | ಒಟ್ಟು 61,58,352 |
ಒಟ್ಟು 76,84,939 |
:{::ಜಾತಿ ದತ್ತಾಂಶಕ್ಕೆ ವಿರೋಧದ ಸಿಡಿಮಿಡಿ::}:
ಪ್ರಸಕ್ತ ಜಾತಿ ದತ್ತಾಂಶ ಸಮೀಕ್ಷೆಗೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 'ಪ್ರವರ್ಗ 3ಬಿ'ಯಲ್ಲಿ 67 ಲಕ್ಷ ಜನಸಂಖ್ಯೆ ಎಂದು ತೋರಿಸಲಾಗಿದೆ. ಇದರಿಂದ ಶೇ. 6.6 ರಷ್ಟು ಜನಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವೀರಶೈವ ಲಿಂಗಾಯತರ ಒಳಪಂಗಡಗಳನ್ನು ವಿಭಜಿಸಿ, ಕೆಲವರನ್ನು ಬೇರೆ ಪ್ರವರ್ಗಗಳಿಗೆ ಸೇರಿಸಲಾಗಿದೆ. ಈ ಕುರಿತಾಗಿ ಸಮುದಾಯದ ಸಚಿವರು ಮುಖ್ಯಮಂತ್ರಿಗಳ ಗಮನ ಸೆಳೆಯಲಿದ್ದಾರೆ ಎಂದು ತಿಳಿಸಿದರು.
ಸಮೀಕ್ಷೆ ನಂತರ ಮಹಾಸಭೆಯ ತೀರ್ಮಾನ
ಜಾತಿ ಜನಗಣತಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಭೆ ನಡೆಯಿತು. ಸಂಪೂರ್ಣ ದತ್ತಾಂಶ ಹೊರಬಂದ ನಂತರ ಹೆಚ್ಚು ಸ್ಪಷ್ಟತೆ ಬರಬಹುದೆಂದು ಅಭಿಪ್ರಾಯ ವ್ಯಕ್ತವಾಯಿತು. ನಂತರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ ಹಾಗೂ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ವ್ಯವಸ್ಥೆಯ ವೈಮನಸ್ಯ: ಒಕ್ಕಲಿಗರ ಅಸ್ತಿತ್ವಕ್ಕೆ ಮರಣ ಶಾಸನ"
ಹಿಂದೆ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದ್ದವರು ಈಗ ದ್ವಂದ್ವ ಧ್ವನಿ ಹೊರಡಿಸುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಜಾತಿ ಗಣತಿಗೆ ಅವರು ಶಿರಬಾಗಿ ಸಮ್ಮತಿ ನೀಡಿದ್ದಾರೆ ಎಂಬ ಆಕ್ರೋಶವಿದೆ. ರಾಜ್ಯ ಸರ್ಕಾರ ಸ್ವೀಕರಿಸಿದ ವರದಿಯನ್ನು ಕೆಲವರು "ದ್ವೇಷದ ಗಣತಿ" ಎಂದು ವಿವರಿಸಿದ್ದಾರೆ. ವರದಿಯ ಅಂಕಿಅಂಶಗಳನ್ನು ಆಯ್ಕೆಯಾಗಿ ಹರಿಬಿಡಲಾಗಿದೆ ಎಂಬ ಆರೋಪವಿದೆ. ಹಳೇ ಮೈಸೂರು ಪ್ರದೇಶಗಳಲ್ಲಿ ಇರುವ ಒಕ್ಕಲಿಗ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜಕೀಯ ಹಗೆತನಕ್ಕೆ ವರದಿ?
ಸರ್ಕಾರ ನಿರ್ದಿಷ್ಟ ಸಮುದಾಯಗಳ ವಿರುದ್ಧ ರಾಜಕೀಯ ಹಾಗೂ ಸಾಮಾಜಿಕ ಹಗೆತನ ಸಾಧಿಸಲು ಈ ವರದಿಯನ್ನು ಬಳಸುತ್ತಿದೆ ಎಂಬ ಆರೋಪವಿದೆ. ಈ ಕಾರಣದಿಂದ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಹಾಗೂ ಹೋರಾಟವೂ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಪ್ರವರ್ಗ 1 ಒಕ್ಕೂಟದ ಆಕ್ಷೇಪ
ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಸಲ್ಲಿಸಿದ ವರದಿಯಲ್ಲಿ ಕೆನೆ ಪದರ ನೀತಿ ಅಳವಡಿಸುವ ಶಿಫಾರಸು ಮಾಡಲಾಗಿದೆ. ಇದರಿಂದ ಪ್ರವರ್ಗ 1 ಎಯ ಅಡಿಯಲ್ಲಿ ಬರುವ ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂದು ಒಕ್ಕೂಟದ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
ಅತ್ಯಂತ ಹಿಂದುಳಿದವರ ಪಟ್ಟಿಯಲ್ಲಿ ಹತ್ತುಕ್ಕಿಂತ ಹೆಚ್ಚು ಮುಸ್ಲಿಂ ಜಾತಿಗಳು ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟ ಜಾತಿಯ ಸಮುದಾಯಗಳು ಸೇರಿಸಲ್ಪಟ್ಟಿವೆ. ಅವರನ್ನು ಹೊರಗಿಟ್ಟು ಆಯೋಗಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬ ದೂರು ಹೊರಹೊಮ್ಮಿದೆ.
-ಸಂಪಾದಕೀಯ ಶರಣಗೌಡ ಪಾಟೀಲ್ ಪಾಳಾ