ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಹಂಪನವರಿಗೆ ಪ್ರದಾನ

ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಹಂಪನವರಿಗೆ ಪ್ರದಾನ
ಬೆಂಗಳೂರು:ಕನ್ನಡ ಜನಶಕ್ತಿ ಕೇಂದ್ರ, ಬೆಂಗಳೂರಿನಿಂದ ಪ್ರತಿವರ್ಷ ನೀಡುವ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಯನ್ನು ಈ ಬಾರಿ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಪ್ರಸಿದ್ಧ ವಿದ್ವಾಂಸರಾದ ಹಂಪನಾ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
1915 ರಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಗೀತ ಹಾಗೂ ವಾಸ್ತುಶಿಲ್ಪದ ಅಭಿವೃದ್ಧಿಗಾಗಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಮಹತ್ವಪೂರ್ಣ ಕಾರ್ಯವನ್ನು ನೆನಪಿಸಿಕೊಂಡು, ಅವರ ಸೇವೆಗಾಗಿ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ರೂ. 25,000 ನಗದು, ಕಂಚಿನ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ನಾಡು-ನುಡಿಗೆ ಅಪರೂಪದ ಸೇವೆ ಸಲ್ಲಿಸಿದ ಹಂಪನವರನ್ನು ಗೌರವಿಸಲು ಈ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ನಾಲ್ವಡಿಯವರ ಆಡಳಿತ ದಕ್ಷತೆ ಹಾಗೂ ಕಲಾ ಸಾಹಿತ್ಯ ಪ್ರೇಮದ ನೆನಪಾಗಿ ಈ ಸಂದರ್ಭದಲ್ಲಿ ಅವರ ಸಂಸ್ಮರಣೆಯೂ ನೆರವೇರಲಿದೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಪ್ರಕಟಣೆ ತಿಳಿಸಿದೆ.