ಪೊಲೀಸ್ ಅಧಿಕಾರಿ ಮೇಲೆ ದರ್ಪ ಸಿಎಂ ಕ್ಷಮೆಯಾಚನೆಗೆ ಸಿರಗಾಪೂರ ಒತ್ತಾಯ

ಪೊಲೀಸ್ ಅಧಿಕಾರಿ ಮೇಲೆ ದರ್ಪ ಸಿಎಂ ಕ್ಷಮೆಯಾಚನೆಗೆ ಸಿರಗಾಪೂರ ಒತ್ತಾಯ
ಕಲಬುರಗಿ: ಪಾಕಿಸ್ತಾನದ ಪರ ಸಹಾನುಭೂತಿ ಮಾತನಾಡಿ ಅಖಂಡ ಭಾರತದ ಏಕತೆಯ ನಡುವೆ ಬಿರುಕು ಮೂಡಿಸುವ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಇಂದು ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ರಾಷ್ಟ್ರಭಕ್ತ ಮಹಿಳೆಯರು ದಿಟ್ಟತನದಿಂದ ಘೋಷಣೆ ಕೂಗುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಚಲಿತಗೊಂಡ ಮುಖ್ಯಮಂತ್ರಿಗಳು ಸಮವಸ್ತ್ರದಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಸಂಬೋಧಿಸಿ, ಹತಾಶೆಯಿಂದ ಆರ್ಭಟಿಸಿ ಕೈ ಮಾಡಲು ಮುಂದಾಗಿರುವ ಕ್ರಮ ಮುಖ್ಯಮಂತ್ರಿ ಸ್ಥಾನದ ಘನತೆಗೆ ಧಕ್ಕೆ ತಂದ ಗೂಂಡಾ ವರ್ತನೆಯಾಗಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅನುಭವದ ಹಿರಿತನ, ನಡುವಳಿಕೆ, ಹಾಗೂ ಮಾತುಗಳನ್ನು ಮಾಗಿಸಬೇಕು, ಆದರೆ ಸಿದ್ದರಾಮಯ್ಯನವರ ವಿಷಯದಲ್ಲಿ ಇದು ತಿರುಗು-ಮುರುಗಾಗಿದೆ, ದಿನೇ ದಿನೇ ಅವರು ತಮ್ಮ ನಾಲಿಗೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಹತಾಶೆಯಿಂದ ಜನರು ಹಾಗೂ ಅಧಿಕಾರಿಗಳ ಮೇಲೆ ಅಹಂಕಾರ ಹಾಗೂ ತೋಳ್ಬಲ ಪ್ರದರ್ಶಿಸುತ್ತಿದ್ದಾರೆ.
ಇದು ಅತ್ಯಂತ ದುರ್ದೈವದ ಹಾಗೂ ಖಂಡನೀಯ ವರ್ತನೆಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಹುದೊಡ್ಡ ಹಿನ್ನೆಲೆಯಿದೆ, ಆ ಸ್ಥಾನದಲ್ಲಿ ಕುಳಿತ ಅನೇಕ ಮಹನೀಯರು ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮೇರುಮಟ್ಟಕ್ಕೆ ಕೊಂಡೊಯ್ದಿದ್ದಾರೆ, ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ ಎಂದರು.ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗುವ ಮೂಲಕ ರಾಷ್ಟ್ರ ಭಕ್ತಿ ಮೆರೆದ ದಿಟ್ಟ ಮಹಿಳೆಯರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ. ಕರ್ತವ್ಯ ನಿರತ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ದರ್ಪ ತೋರಿ ಅವರ ಮೇಲೆ ಹಲ್ಲೆಗೆ ಮುಂದಾದ ಸಿದ್ದರಾಮಯ್ಯನವರ ವರ್ತನೆ ಇಡೀ ಪೊಲೀಸ್ ಇಲಾಖೆಗೆ ಮಾಡಿದ ಅಪಮಾನವಾಗಿದೆ. ಈ ಹಿನ್ನೆಲೆಯಲ್ಲಿ ಅವಮಾನಕ್ಕೊಳಗಾದ ಪೊಲೀಸ್ ಅಧಿಕಾರಿ ಹಾಗೂ ಇಡೀ ಪೊಲೀಸ್ ಇಲಾಖೆಗೆ ಸಿದ್ದರಾಮಯ್ಯನವರು ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.