ಕಡೇಚೂರ್ ಕೈಗಾರಿಕಾ ಘಟಕ ದುರಂತ ಸ್ಥಳ ಪರಿಶೀಲಿಸಿದ ಬಿಜೆಪಿ ತಂಡ ತುರ್ತು ತನಿಖೆಗೆ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸರಕಾರಕ್ಕೆ ಒತ್ತಾಯ
ಕಡೇಚೂರ್ ಕೈಗಾರಿಕಾ ಘಟಕ ದುರಂತ ಸ್ಥಳ ಪರಿಶೀಲಿಸಿದ ಬಿಜೆಪಿ ತಂಡ
ತುರ್ತು ತನಿಖೆಗೆ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸರಕಾರಕ್ಕೆ ಒತ್ತಾಯ
ಯಾದಗಿರಿ : ಕಡೇಚೂರ್ ಕೈಗಾರಿಕಾ ಪ್ರದೇಶದ ಕಂಪನಿಯಲ್ಲಿ ಸಂಭವಿಸಿದ ದುರಂತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ಹಾಗೂ ಬಾಡಿಯಾಳ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿನ ಪರಿಸರ ಮಾಲಿನ್ಯದ ಬಗ್ಗೆ ಪರಿಶೀಲನೆಗಾಗಿ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ನೇತೃತ್ವದ ಬಿಜೆಪಿ ತಂಡವು ಭೇಟಿ ಮಾಡಿ ಘಟನೆಯನ್ನು ತುರ್ತು ಸಮಸ್ಯೆ ಎಂದು ಘೋಷಿಸಿ ಕೂಡಲೇ ಸಮಗ್ರ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದರು.
ಡಾ. ಉಮೇಶ್ ಜಾಧವ್ ನೇತೃತ್ವದ ಬಿಜೆಪಿ ನಾಯಕರ ತಂಡವು ಶುಕ್ರವಾರ (ಆಗಸ್ಟ 7 ರಂದು) ಕಡೇ ಚೂರ್ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ ಇದು ಸರಕಾರದ ತೀವ್ರ ನಿರ್ಲಕ್ಷಕ್ಕೆ ಸಾಕ್ಷಿಯಾದ ಘಟನೆಯಾಗಿದೆ. ದುರಂತ ನಡೆದ ಕೈಗಾರಿಕಾ ಕಂಪನಿಯಲ್ಲಿ ಒಟ್ಟು 35 ಜನ ಕಾರ್ಮಿಕರದ್ದು ಒಬ್ಬ ಎಚ್ಆರ್ ಮತ್ತು ಒಬ್ಬ ಮ್ಯಾನೇಜರ್ ಕೆಲಸ ನಿರ್ವಹಿಸುತ್ತಿದ್ದು ದುರಂತ ಘಟನೆಯಲ್ಲಿ ಮಧ್ಯಪ್ರದೇಶದ ಇಬ್ಬರು ಹಾಗೂ ತೆಲಂಗಾಣದ ಒಬ್ಬರು ಜೀವ ಕಳೆದುಕೊಂಡಿದ್ದಾರೆ.ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದು ಮೂವರು ಗಾಯಗೊಂಡಿದ್ದಾರೆ. ಕಾರ್ಮಿಕ ಕಾನೂನು ಹಾಗೂ ಪರಿಸರ ಮಾಲಿನ್ಯ ಕಾನೂನುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕೈಗಾರಿಕಾ ಪ್ರದೇಶದ ಕಂಪನಿಯಿಂದ ಇಂತಹ ದುರಂತ ಸಂಭವಿಸಿದೆ. ಯಾದಗಿರಿ, ಗುರುಮಠಕಲ್, ಸೈದಾಪುರ, ಬಾಡಿಯಾಳ, ಕಡೆಚೂರ್ ವ್ಯಾಪ್ತಿಯ ಜನರು ವಿಷ ಬೆರೆತ ಮಲಿನ ನೀರು ಹರಿಯುವ ಪ್ರದೇಶದಲ್ಲಿ ಜೀವನ ಮಾಡುತ್ತಿದ್ದು ಮನುಷ್ಯ ಬದುಕು ಪ್ರಾಣಿಗಳಿಗಿಂತ ಕಡೆಯಾಗಿದೆ. ನೀರಿನ ಕೆಟ್ಟ ವಾಸನೆಯಿಂದ ಬದುಕು ದುಸ್ತರವಾಗಿದೆ. ಬಿಜೆಪಿ ತಂಡವು ಯಾವುದೇ ರಾಜಕೀಯ ಮಾಡಲು ಎಲ್ಲಿಗೆ ಭೇಟಿ ನೀಡಿಲ್ಲ.ಜನರ ಸಮಸ್ಯೆಗೆ ಸ್ಪಂದಿಸಲು ಭೇಟಿ ಮಾಡಿದೆ. ಘಟನೆಯನ್ನು ತುರ್ತು ಸಮಸ್ಯೆ ಎಂದು ಸರಕಾರವು ಪರಿಗಣಿಸಿ ಕೂಡಲೇ ಸುರಕ್ಷತಾ ಕ್ರಮ ಸೇರಿದಂತೆ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಪರಿಸರ ಇಲಾಖೆಯ ಸದಸ್ಯ ಕಾರ್ಯದರ್ಶಿಗಳಾದ ಗೋಕುಲ್ ಅವರೊಂದಿಗೆ ಕೂಡ ಮಾತುಕತೆ ನಡೆಸಲಾಗುವುದು ಎಂದು ಡಾ. ಜಾಧವ್ ಹೇಳಿದರು.
ಬಾಡಿಯಾಳದಲ್ಲಿ ಹರಿಯುವ ನೀರು ವಿಷ ಮಿಶ್ರಿತಗೊಂಡಿದ್ದು ಪೂರ್ಣವಾಗಿ ಕಲುಷಿತವಾಗಿದೆ. ಹಿಂದುಳಿದ ಈ ಪ್ರದೇಶದಲ್ಲಿ ಕೈಗಾರಿಕೆಗಳ ಮಾಲಿನ್ಯದಿಂದಾಗಿ ಜನಜೀವನ ಕಷ್ಟವಾಗುತ್ತಿರುವ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಾಧವ್ ಒತ್ತಾಯಿಸಿದರು.
ಬಿಜೆಪಿ ಪರಿಶೀಲನಾ ತಂಡದಲ್ಲಿ ಮಹೇಶ್ ರೆಡ್ಡಿ ಗೌಡ ಮುದ್ನಾಳ್, ದೇವರಾಜ್ ನಾಯಕ್, ರವಿ ರಾಥೋಡ್, ಬಂಗಾರು ರಾಥೋಡ್, ಪರಶುರಾಮ ಕುರುಕುಂಟ, ಅಮೃತ ಬೋರಬಂಡ, ವಿಕ್ರಂ ಚೌಹಾಣ್, ವಿಜಯ ಜಾಧವ್, ವಿನೋದ್ ಚೌಹಾಣ್ ಯಾಗಾಪುರ, ರವಿ ಸಾಹುಕಾರ್ ಯುವರಾಜ್ ಮತ್ತಿತರರು ಇದ್ದರು.

