ಕರ್ನಾಟಕ ಜಾನಪದ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಸಸಿಗೆ ನೀರೆರೆದು ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಚಾಲನೆ
ಕರ್ನಾಟಕ ಜಾನಪದ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಸಸಿಗೆ ನೀರೆರೆದು ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಚಾಲನೆ
ಜಾನಪದ ಸಂಸ್ಕೃತಿ ಉಳಿವಿನಿಂದ ಕಲಾ ಸಂಪತ್ತು ಬೆಳೆಯಲಿದೆ
ಕಲಬುರಗಿ : ಕರ್ನಾಟಕ ಜಾನಪದ ಸಂಪತ್ತು ಅತ್ಯಂತ ಶ್ರೀಮಂತವಾಗಿದ್ದು, ಹಿರಿಯರಿಂದ ಬೆಳೆದು ಬಂದಿರುವ ವೈವಿದ್ಯಮಯ ಸಂಸ್ಕೃತಿ ಮತ್ತು ಕಲೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಜಾನಪದ ಸಂಸ್ಕೃತಿ ಉಳಿವಿನಿಂದ ಮಾತ್ರ ಕಲಾ ಸಂಪತ್ತು ಬೆಳೆಯಲು ಸಾಧ್ಯವಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ಜಾನಪದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಜನರ ಬದುಕಿನ ನೈಜ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳು ಮನರಂಜನೆಯ ಸಾಧನವಾಗಿವೆ. ಕಲೆಗಳನ್ನು ಆಸ್ವಾದಿಸಿ, ಆನಂದಿಸುವ ಮೂಲಕ ಸಂರಕ್ಷಿಸದಿದ್ದರೆ ಭವಿಷ್ಯದ ದಿನಗಳಲ್ಲಿ ಯೂಟ್ಯೂಬ್, ಇನ್ಸ÷್ಟಗ್ರಾಮ್ ಮತ್ತು ಎಐಗಳಲ್ಲಿ ಮಾತ್ರ ನೋಡುವಂತಾಗುತ್ತದೆ. ಆದರಿಂದ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ವೈವಿದ್ಯಮಯ ಜಾನಪದ ಕಲೆಗಳನ್ನು ಪೋಷಿಸುವುದು ಎಲ್ಲರ ಕರ್ತವ್ಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ವಲಯದ ಜಂಟಿ ನಿರ್ದೇಶಕ ಬಸವರಾಜ ಹೂಗಾರ್ ಅತಿಥಿಯಾಗಿ ಮಾತನಾಡಿ ಕೇವಲ ಜಾನಪದ ಸಂಸ್ಕೃತಿ ಉಳಿಯಬೇಕು ಎಂಬ ಚರ್ಚೆಯಿದೆ. ಆದರೆ, ಇಡೀ ಸಮಾಜ ಜಾತಿ ಕೂಪವಾಗಿದೆ. ಕಲೆಯನ್ನು ಒಂದೇ ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಜಾನಪದ ಮತ್ತು ವರ್ತಮಾನದೊಂದಿಗೆ ಅನುಸಂಧಾನ ಮಾಡದೆ ಜಾನಪದ ಕಲೆಗೆ ಉಳಿಗಾಲವಿಲ್ಲ. ಜಾನಪದದ ಮೂಲ ಸ್ವರೂಪ ಬದಲಾಗದೆ ರೂಪಾಂತರ ಮಾಡಬೇಕು. ಪ್ರೀತಿ, ಪ್ರೇಮ, ಬಣ್ಣ, ಸೌಂದರ್ಯ, ಬಡತನ ಹೀಗೆ ಹತ್ತಾರು ವಿಷಯಗಳನ್ನಿಟ್ಟುಕೊಂಡು ಹಾಡ ರಚಿಸುವಾಗ ಯಾರಿಗೂ ನೋವಾಗದಂತೆ ಎಚ್ಚರ ವಹಿಸಬೇಕು. ಬಹುತೇಕ ಜನಪದ ಹಾಡುಗಳಲ್ಲಿ ಶೇ 80 ರಷ್ಟು ಮಹಿಳೆ ಕುರಿತಾಗಿವೆ. ಹೆಣ್ಣನ್ನು ನೋಡುವ ದೃಷ್ಠಿಕೋನ ಹಾಡುಗಳಲ್ಲಿ ರಚಿಸುವಾಗ ಜಾಗರೂಕತೆ ವಹಿಸಬೇಕು. ಸಂವಿಧಾನ ಜಾರಿ ನಂತರ ಮಹಿಳೆಯರ ಬದುಕು ಬದಲಾವಣೆಗೊಂಡಿದೆ ಎಂದು ಕೆಲವು ಜಾನಪದ ಹಾಡುಗಳ ಮೂಲಕ ವಿವರಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರು ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾನಪದ ನಮ್ಮ ಬದುಕು. ಕಲೆ ಎಂಬುದು ತಳವರ್ಗ ಸಮುದಾಯಗಳಿಗೆ ಮಾತ್ರ ಸೀಮಿತ ಮಾಡುತ್ತಿದ್ದಾರೆ. ಮೇಲ್ವರ್ಗದ ಜನರಲ್ಲಿರುವ ಕಲೆ ಬೇಕ, ಕಲಾವಿದರು ಬೇಕಿಲ್ಲ ಎಂಬ ಮನಸ್ಥಿತಿ ಬದಲಾಗಬೇಕು. ತಳವರ್ಗದ ಜನರ ಹಾಡು, ಕುಣಿತ, ನೃತ್ಯ, ಸಂಗೀತ ಕೇಳಲು ಬಯಸಿದಂತೆ ಗ್ರಾಮೀಣ ಕಲೆ ಮತ್ತು ಕಲಾವಿದರನ್ನು ಗೌರವಿಸಿ ಕಲಾ ಪರಂಪರೆಯನ್ನು ಬೆಳೆಸಬೇಕು. ಪ್ರೊ. ಹಾ.ಮಾ. ನಾಯಕರು, ಚನ್ನಣ್ಣ ವಾಲಿಕಾರ, ಇಮ್ರಾಪುರ, ಪ್ರೊ. ಬಿ. ಬಿ. ಹೆಂಡಿ, ಪ್ರೊ. ಪಿ.ಕೆ. ಖಂಡೋಬಾ, ಪ್ರೊ. ಡಿ. ಬಿ. ನಾಯಕ್ ಮುಂತಾದವರು ಕರ್ನಾಟಕ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗ ಜಾನಪದ ಕ್ಷೇತ್ರವನ್ನು ವಿಸ್ತರಿಸಿದ್ದಾರೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಂಚಾಲಕ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ, ಸಿಂಡಿಕೇಟ್ ಸದಸ್ಯೆ ಡಾ. ಶ್ರೀದೇವಿ ಕಟ್ಟಿಮನಿ, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ. ಸುರೇಶ ಜಂಗೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂದರ್ಶಕ ಪ್ರಾಧ್ಯಾಪಕ ಡಾ. ಸೂರ್ಯಕಾಂತ್ ಸುಜ್ಯಾತ್, ಸಾಹಿತಿ ಸುಜಾತ ಚಲುವಾದಿ, ಹಿರಿಯ ಜಾನಪದ ವಿದ್ವಾಂಸರ ಎ.ಕೆ. ರಾಮೇಶ್ವರ ಮುಂತಾದವರು ಇದ್ದರು. ಕಲಾ ನಿಕಾಯದ ವಿಭಾಗಗಳ ಅತಿಥಿ ಉಪನ್ಯಾಸಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಜಯ ದಾನಮ್ಮ ಹಾಗೂ ಸಂಗಡಿಗರು ನಾಡಗೀತೆ ಮತ್ತು ಜಾನಪದ ಗೀತೆಗಳನ್ನಾಡಿದರು. ಡಾ. ಎಂ. ಬಿ. ಕಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ಡಾ. ಹಣಮಂತ ಮೇಲಕೇರಿ ವಂದಿಸಿದರು.
ಕಲ್ಯಾಣ ಕರ್ನಾಟಕ ಜಾನಪದ ಕ್ಷೇತ್ರದ ಫಿನ್ಲ್ಯಾಂಡ್ ಇದ್ದಂತೆ. ಜಾನಪದ ಕ್ಷೇತ್ರಕ್ಕೆ ಕಲ್ಯಾಣ ಕರ್ನಾಟಕ ಜಾನಪದಕ್ಕೆ ಶರಣರು, ಸೂಫಿಗಳು, ದಾಸರು, ವಚನಕಾರರು ಒತ್ತಾಸೆಯಾಗಿ ನಿಂತಿದ್ದಾರೆ. ಜನಪದ ಕಲೆ ನಶಿಸಲು ಜಾತಿ ಮತ್ತು ಸಾಮುದಾಯಿಕ ಹಿಂಜರಿಕೆ ಕಾರಣವಾಗುತ್ತಿದೆ. ವಿಜ್ಞಾನದ ಮೇಲಿನ ನಂಬಿಕೆಯ0ತೆ ಜಾನಪದ ಹಾಡುಗಳಲ್ಲಿ ವೈಜ್ಞಾನಿಕತೆ ಮತ್ತು ವಾಸ್ತವ ಸಂಗತಿ ಬಿಂಬಿಸುವ0ತೆ ರಚಿಸಿ ಹಾಡಿದರೆ ಜನಪದ ಕಲೆ ಉಳಿಯುತ್ತದೆ. ಆದರಿಂದ ಹೊಸ ತಲೆಮಾರಿನ ಯುವಕರು, ವಿದ್ಯಾರ್ಥಿಗಳು, ಆಸಕ್ತರು ಜಾನಪದ ಕಲೆಯ ವಿವಿಧ ಪ್ರಕಾರಗಳನ್ನು ಅಧ್ಯಯನ ಮಾಡಿ ಸಾಧನೆ ಮಾಡಿದರೆ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು.

