ಡಾ. ಸದಾನಂದ ಪೆರ್ಲಗೆ ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಡಾ. ಸದಾನಂದ ಪೆರ್ಲಗೆ ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಡಾ. ಸದಾನಂದ ಪೆರ್ಲಗೆ ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಶ್ರೇಷ್ಠ ವ್ಯಕ್ತಿತ್ವದ ಹೆಸರಿನ ಪ್ರಶಸ್ತಿ ಅರ್ಹ ವ್ಯಕ್ತಿಗೆ ಸಂದಿರುವುದು ಸ್ವಾಗತಾರ್ಹ: ಉಳಿಯತ್ತಡ್ಕ

ಕಾಸರಗೋಡು: ನಾಡೋಜ ಡಾ.ಕಯ್ಯಾರ ಪ್ರಶಸ್ತಿಗೆ ಸಾಹಿತ್ಯ ಹಾಗೂ ಮಾಧ್ಯಮ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿ ಜನಪ್ರಿಯ ರಾದ ಡಾ. ಸದಾನಂದ ಪೆರ್ಲರಿಗೆ ಕಯ್ಯಾರರ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ನೀಡಿರುವುದರಿಂದ ಅರ್ಹ ವ್ಯಕ್ತಿಗೆ ಶ್ರೇಷ್ಠ ವ್ಯಕ್ತಿಯ ಹೆಸರಿನ ಪ್ರಶಸ್ತಿ ನೀಡಿರುವ ಕೀರ್ತಿಗೆ ಸಂಸ್ಥೆಯು ಭಾಜನವಾಗಿದೆ ಎಂದು ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಹೇಳಿದರು. 

   ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ ಕನ್ನಡ ಭವನ ಪ್ರಕಾಶನ ಸಂಸ್ಥೆಯಿಂದ ನಾಡೋಜ ಡಾ. ಕಯ್ಯಾರ ಕಿಞ್ಣಣ್ಣ ರೈ ಜನ್ಮದಿನೋತ್ಸವದ ಪ್ರಯುಕ್ತ 2025 ನೆಯ ಸಾಲಿನ ನಾಡೋಜ ಡಾ. ಕಯ್ಯಾರ ಪ್ರಶಸ್ತಿಯನ್ನು ಜೂನ್ 16ರಂದು ಸೋಮವಾರ ಪ್ರದಾನ ಮಾಡಿದ ನಂತರ ಮಾತನಾಡಿ ಸಾಹಿತ್ಯ ರಂಗ ಹಾಗೂ ಮಾಧ್ಯಮ ರಂಗದಲ್ಲಿ ತಮ್ಮ ಅವಿರತ ದುಡಿಮೆಯಿಂದ ಸಾಂಸ್ಕೃತಿಕ ಕ್ಷೇತ್ರವನ್ನು ಬೆಳೆಸಿದ ಪೆರ್ಲ ಅವರು ಕಯ್ಯಾರರನ್ನು ಪ್ರಾತಿನಿಧಿಕ ಕವಿಯಾಗಿ ಇಟ್ಟುಕೊಂಡು ಕಾಸರಗೋಡಿನ ಹೋರಾಟವನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಮಹತ್ವಪೂರ್ಣವಾದ ಮಹಾಪ್ರಬಂಧವನ್ನು ಮಂಡಿಸಿ ಕಾಸರಗೋಡಿನ ಹಿರಿಯ ಸಾಹಿತಿ ಮತ್ತು ಹೋರಾಟದ ಸಂಕಥನ ವನ್ನು ದಾಖಲೆ ಮಾಡಿದ್ದಾರೆ. ಗಡಿನಾಡ ಕನ್ನಡಿಗನಾಗಿ ಅವರು ನಾಡಿನ ಉದ್ದಗಲಕ್ಕೂ ಮಾಧ್ಯಮ ಮತ್ತು ಸಾಹಿತ್ಯವನ್ನು ಮೈಗೂಡಿಸಿಕೊಂಡು ಅವರ ಪ್ರಾಮಾಣಿಕ ಮತ್ತು ನಿಷ್ಕಲ್ಮಶ ಸೇವೆ ನಿರ್ವಹಿಸಿರುವುದನ್ನು ಮನಗಂಡು ಖ್ಯಾತ ಸಾಹಿತಿ, ಮಹಾನ್ ಚೇತನ ಕಯ್ಯಾರರ ಪ್ರಶಸ್ತಿ ಯನ್ನು ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿಯವರು ಗುರುತಿಸಿ ನೀಡಿರುವುದು ಪ್ರಶಂಸನೀಯ ಎಂದರು.

ಹತ್ತೂರ ಸನ್ಮಾನಕ್ಕಿಂತ ಹುಟ್ಟೂರ ಕಯ್ಯಾರ ಪ್ರಶಸ್ತಿ ಶ್ರೇಷ್ಠ : ಡಾ.ಪೆರ್ಲ

ಹತ್ತೂರಲ್ಲಿ ಪಡೆಯುವ ಸನ್ಮಾನಕ್ಕಿಂತಲೂ ಹುಟ್ಟೂರಿನಲ್ಲಿ ಅದರಲ್ಲೂ ಮುಖ್ಯವಾಗಿ ಕನ್ನಡ ನಾಡು ನುಡಿಗಾಗಿ ಜೀವನ ಪರ್ಯಂತ ತಪಸ್ಸಿನಂತೆ ದುಡಿದ ಶ್ರೇಷ್ಠ ಕನ್ನಡದ ಕಟ್ಟಾಳು ನಾಡೋಜ ಡಾ. ಕಯ್ಯಾರರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪಡೆದಿರುವುದು ಜೀವನದ ದೊಡ್ಡ ಭಾಗ್ಯ ಎಂದು ಕಲಬುರಗಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಸಂತಸ ವ್ಯಕ್ತಪಡಿಸಿದರು. 

 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ರಾಜ್ಯಮಟ್ಟದಲ್ಲಿ ಮಾಧ್ಯಮ ರಂಗದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ರಾಷ್ಟ್ರಮಟ್ಟದಲ್ಲಿ ಬಾನುಲಿ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಪುರಸ್ಕಾರ ಪಡೆದಿದ್ದರೂ ಹುಟ್ಟೂರಿನಲ್ಲಿ ಗಡಿನಾಡ ಕನ್ನಡಿಗರು ಗೌರವದಿಂದ ನೀಡುವ ಕಯ್ಯಾರರ ಹೆಸರಿನ ಪ್ರಶಸ್ತಿ ಪಡೆದಿರುವುದಕ್ಕೆ ಧನ್ಯ ನಾಗಿದ್ದೇನೆ.ಕವಿ, ಹೋರಾಟಗಾರ ಕಯ್ಯಾರರ ಮತ್ತು ಕಾಸರಗೋಡಿನ ಹೋರಾಟದ ಬಗ್ಗೆ ಅಧ್ಯಯನದ ಮಹಾಪ್ರಬಂದವು ಕಾಸರಗೋಡಿನ ಕನ್ನಡದ ಮತ್ತು ಕಯ್ಯಾರರ ವ್ಯಕ್ತಿತ್ವವನ್ನು ದಾಖಲೆ ಮಾಡಿದ ಮಹತ್ವದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ನಾಡು ನುಡಿ ನಡೆಸಿದ ಈ ಮಹತ್ವದ ಅಧ್ಯಯನವನ್ನು ಕರ್ನಾಟಕ ಸರಕಾರವು ಗಮನಿಸಿ ಡಾ. ಸಿದ್ದಲಿಂಗಯ್ಯ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಕೃತಿ ಪ್ರಕಟಿಸಿ ದೊಡ್ಡ ಕೆಲಸ ಮಾಡಿದೆ ಎಂದು ಡಾ. ಪೆರ್ಲ ಹೇಳಿದರು. ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿಯ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಮಾತನಾಡಿ ಈ ಬಾರಿ ಕನ್ನಡಕ್ಕಾಗಿ ಮತ್ತು ಮಾಧ್ಯಮ ರಂಗದಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸುವುದಕ್ಕೆ ಸಮಿತಿಯು ಪ್ರಯತ್ನಿಸಿ ಪ್ರಶಸ್ತಿ ನೀಡಿದೆ. ಗಡಿನಾಡ ಕನ್ನಡಿಗನಾಗಿ ಡಾ. ಸದಾನಂದ ಪೆರ್ಲ ಅವರ ಕೆಲಸಗಳು ಮಹತ್ವಪೂರ್ಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಸಂಧ್ಯಾರಾಣಿ, ಪತ್ರಕರ್ತರಾದ ಪುರುಷೋತ್ತಮ್ ಪೆರ್ಲ ಉಪಸ್ಥಿತರಿದ್ದರು. ಎಡನೀರು ಸ್ವಾಮೀಜಿಸ್ ಪ್ರೌಢಶಾಲೆಯ ಉಪನ್ಯಾಸಕರಾದ ಪ್ರವೀಣ್ ರೈ ಧನ್ಯವಾದವಿತ್ತರು.