ಪಾಶ್ಚಾತ್ಯ ಕಾವ್ಯಮೀಮಾಂಸೆ ಕೃತಿ ಬಿಡುಗಡೆ

ಪಾಶ್ಚಾತ್ಯ ಕಾವ್ಯಮೀಮಾಂಸೆ ಕೃತಿ ಬಿಡುಗಡೆ ಸಮಾರಂಭದ ವರದಿಡಾ. ಸುರೇಂದ್ರಕುಮಾರ ಕೆರಮಗಿಯರ ‘ಪಾಶ್ಚಾತ್ಯ ಕಾವ್ಯಮೀಮಾಂಸೆ’ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತಡಾ. ಯಮನಪ್ಪ ಮ್ಯಾಗೇರಿ.
ಕಲಬುರಗಿ. ಇಲ್ಲಿನ ಸರಕಾರಿ ಮಹಾವಿದ್ಯಾಲಯದ ಕನ್ನಡ ಎಂ.ಎ. ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ‘ಪಾಶ್ಚಾತ್ಯ ಕಾವ್ಯಮೀಮಾಂಸೆ’ ಕೃತಿ ದಿನಾಂಕ 10-06-2025 ರಂದು ಬಿಡುಗಡೆ ಮಾಡಿ ಮಾತನಾಡುತ್ತ ಸರಕಾರಿ ಪ್ರ.ದ.ಕಾಲೇಜು ಸುಲೆಪೇಟಿನ ಕನ್ನಡ ಪ್ರಾಧ್ಯಾಪಕರಾದ ಡಾ. ಯಮನಪ್ಪ ಮ್ಯಾಗೇರಿಯವರು ಡಾ. ಸುರೇಂದ್ರಕುಮಾರ ಕೆರಮಗಿಯವರು ಬರೆದ ‘ಪಾಶ್ಚಾತ್ಯ ಕಾವ್ಯಮೀಮಾಂಸೆ’ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದರು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ಬರೀ ಕೃತಿಗಳ ಹೆಸರನ್ನು ಹೇಳಿದರೆ ಸಾಲದು. ಪ್ರತಿಕೃತಿಗಳ ಒಳಹೂರಣ ಅರಿತಿರಬೇಕು. ಕೆಲವೊಂದು ಕೃತಿಗಳು ಆಮೂಲಾಗ್ರವಾಗಿ ಓದಬೇಕಾದ ಅವಶ್ಯಕತೆಯಿದೆ. ಅವುಗಳ ಸಾರ ಹಾಗೂ ಸಂದರ್ಭಗಳನ್ನು ಅರಿತು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಈ ದೃಷ್ಟಿಯಿಂದ ಡಾ. ಕೆರಮಗಿಯವರು ಬರೆದಿರುವ ಪಾಶ್ಚಾತ್ಯ ಕಾವ್ಯ ಮೀಮಾಂಸೆ ಪ್ರಯೋಜನಕಾರಿಯಾಗಿದೆ’ ಎಂದರು. ಪ್ರಾರಂಭದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗಪ್ಪ ಟಿ. ಗೋಗಿಯವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡುತ್ತ ಕೃತಿ ಹಾಗೂ ಕೃತಿಕಾರರ ಮಹತ್ವ ವಿವರಿಸಿದರು. ಪಾಶ್ಚಾತ್ಯ ಕಾವ್ಯಮೀಮಾಂಸೆಯ ಸ್ವರೂಪ, ವ್ಯಾಪ್ತಿ, ಪರಂಪರೆ, ಪ್ರಯೋಜನಗಳಲ್ಲದೇ ಪ್ಲೇಟೋನಿಂದ ಮೊದಲು ಮಾಡಿ ಎಫ್.ಆರ್. ಲೀವಿಸ್ ರ ವರೆಗೆ ಹದಿನೆಂಟು ಜನ ಪಾಶ್ಚಾತ್ಯ ಕಾವ್ಯಚಿಂತಕರ ಬದುಕು, ಬರಹ ಹಾಗೂ ಮೀಮಾಂಸೆಯ ಕುರಿತ ವಿವರಗಳನ್ನು ಡಾ. ಕೆರಮಗಿಯವರು ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ ಎಂದರು. ಡಾ.ಸುರೇಂದ್ರಕುಮಾರ ಕೆರಮಗಿಯವರು ಕೃತಿಯಿಂದ ಸನ್ಮನಿತರಾಗಿ ಮಾತನಾಡುತ್ತ ಇಂದು ವಿಷಯ ಸಂಗ್ರಹ ಹಾಗೂ ಆಳವಾದ ಚಿಂತನೆ ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ತಾಳ್ಮೆ ಇರಬೇಕು. ಒಂದೇ ವಿಷಯಕ್ಕೆ ಸಂಬಂಧಿಸಿದ ಹಲವಾರು ಸಂದರ್ಭಗಳನ್ನು ಓದಿಕೊಂಡಿರಬೇಕು. ಇಂದು ಪ್ರಕಟಣೆ ಹಾಗೂ ಪ್ರಸಾರ ವೇಗವಾಗಿ ನಡೆಯುತ್ತಿದೆ. ಅಂಥಲ್ಲಿ ಸತತಾಭ್ಯಾಸ ಹಾಗೂ ತೌಲನಿಕ ಅಧ್ಯಯನದಿಂದ ಕೃತಿ ರಚಿಸಿ ಗುಣಮಟದ್ಟ ವಿಷಯಗಳನ್ನು ಕೊಡಬೇಕಾರುವುದು ಅಧ್ಯಾಪಕರ ಕರ್ತವ್ಯವಾಗಿದೆ ಎಂದರು. ಡಾ. ರೋಳೆಕರ ನಾರಾಯಣ ಮುಖ್ಯಸ್ಥರು, ಸ್ನಾತಕೋತ್ತರ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಸ.ಮ.ಸ್ವಾ.ಕಲಬುರಗಿಯವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಾಸ್ತç ವಿಷಯಗಳನ್ನು ಹಾಗೂ ಮೀಮಾಂಸೆಯ ವಿಷಯಗಳನ್ನು ಗಂಭೀರವಾಗಿ ಓದುವ ಪ್ರವೃತ್ತಿ ಬರಬೇಕು. ಸದಾ ಗ್ರಂಥಾಲಯದಲ್ಲಿ ಸಂದರ್ಭ ಗ್ರಂಥಗಳನ್ನು ಪರಿಶೀಲಿಸುತ್ತಿರಬೇಕು. ಗುಣಮಟ್ಟದ ಓದು ಮಾತ್ರ ಯಶಸ್ಸಿಗೆ ಸೋಪಾನ ಎಂದರು.
ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಬಿಡುಗೆಯ ಸಮಾರಂಭದಲ್ಲಿ ಸ್ನಾತಕೋತ್ತರ ಹಾಗೂ ಸ್ನಾತಕ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಶಾರದಾದೇವಿ ಜಾಧವ್, ಡಾ. ನಾಗಪ್ಪ ಟಿ. ಗೋಗಿ, ಡಾ. ಸಿದ್ಧಲಿಂಗ ಧಬ್ಬಾ, ನಾಮದೇವ ರಾಠೋಡ ಅಲ್ಲದೇ ಸಿ.ಟಿ. ಹಿರೇಮಠ, ಶಿವಾನಂದ ಹಾಗರಿಗಿ ಮೊದಲಾದವರು ಹಾಜರಿದ್ದರು. ಪ್ರಾರ್ಥನಾಗೀತೆ ಕುಮಾರಿ ಅಂಕಿತಾ ಪುರೋಹಿತ್ ಹಾಗೂ ವಂದನಾರ್ಪಣೆಯನ್ನು ಕುಮಾರಿ ಐಶ್ವರ್ಯ ನಡೆಸಿಕೊಟ್ಟರು. ಎಲ್ಲಾ ಸ್ನಾತಕೋತ್ತರ ಕನ್ನಡ ಎಂಎ. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.