ಶರಣ ಸಂಸ್ಥಾನಕ್ಕೆ ವೈದ್ಯರು ನೀಡಿದ ಸೇವೆ ಶ್ಲಾಘನೀಯ -ಮಾತೋಶ್ರೀ ಪೂಜ್ಯ ಡಾ ದಾಕ್ಷಾಯಿಣಿ ಅವ್ವಾಜಿ
ಶರಣ ಸಂಸ್ಥಾನಕ್ಕೆ ವೈದ್ಯರು ನೀಡಿದ ಸೇವೆ ಶ್ಲಾಘನೀಯ-ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ.
ಕಲಬುರಗಿ; ಸಂಕಷ್ಟದ ಸಮಯದಲ್ಲಿ, ವಿಶೇಷವಾಗಿ ೮ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರು ಅನಾರೋಗ್ಯಕ್ಕೆ ಒಳಗಾದಾಗ, ವೈದ್ಯರು ನಿಸ್ವಾರ್ಥವಾಗಿ ತಮ್ಮ ಅಮೂಲ್ಯ ಸೇವೆಯನ್ನು ಒದಗಿಸಿ, ಸಂಸ್ಥಾನದೊAದಿಗೆ ದೃಢವಾಗಿ ನಿಂತ ಎಲ್ಲಾ ವೈದ್ಯರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಶುಕ್ರವಾರ ಕಲಬುರಗಿ ನಗರದ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ಡಾ. ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅವರು, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಂಸ್ಥಾನಕ್ಕೆ ತಮ್ಮ ವೃತ್ತಿಪರ ಸೇವೆಯನ್ನು ವಿಸ್ತರಿಸಿದ ೧೩ ವೈದ್ಯ ದಂಪತಿಗಳಿಗೆ “ಶರಣ ವೈದ್ಯ ಸೇವಾ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಿದ ಡಾ. ಅವ್ವಾಜಿ, ಶರಣ ಸಂಸ್ಥಾನಕ್ಕೆ ವೈದ್ಯರು ನೀಡಿದ ಸೇವೆಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ ವೈದ್ಯರಿಗೆಲ್ಲರಿಗೂ ಸಂಸ್ಥಾನವು ನೀಡುವ ಈ ಪ್ರಶಸ್ತಿ ಮತ್ತು ಸನ್ಮಾನವು ತಾವೆಲ್ಲ ವೈದ್ಯ ಬಂಧುಗಳು ನೀಡುವ ಅಮೂಲ್ಯ ಸೇವೆಗಳಿಗಿಂತ ಹೆಚ್ಚೇನೂ ಅಲ್ಲ ಎಂದು ಹೇಳಿದರು.
ಸಂಸ್ಥಾನವು, ವೈದ್ಯರನ್ನು ಮಾತ್ರವಲ್ಲದೆ ವೈದ್ಯ ದಂಪತಿಗಳನ್ನು ಉತ್ಸಾಹದಿಂದ ಗೌರವಪೂರ್ವಕವಾಗಿ ಸನ್ಮಾನಿಸಿತು. ಕೆಲ ವೈದ್ಯರ ಪೋಷಕರನ್ನೂ ಸಹ ಶಾಲು, ಸನ್ಮಾನದೊಂದಿಗೆ ಗೌರವಿಸಲಾಯಿತು. ಸಂಸ್ಥಾನವು ಈ ವೈದ್ಯರ ಸೇವೆಗಳನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಸಂಸ್ಥಾನಕ್ಕೆ ತಮ್ಮ ಸೇವೆಗಳನ್ನು ಅದೇ ಉತ್ಸಾಹದಿಂದ ಮುಂದುವರಿಸಲು ವೈದ್ಯರೆಲ್ಲರಲ್ಲಿ ಮನವಿ ಮಾಡಿದರು.
ಕಲಬುರಗಿ ಪ್ರದೇಶದ ಶೈಕ್ಷಣಿಕ ಸನ್ನಿವೇಶದಲ್ಲಿ ಸ್ಪಷ್ಟ ಬದಲಾವಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಲಿಂಗೈಕ್ಯ ಡಾ. ಶರಣಬಸವ ಅಪ್ಪಾಜಿ, ತಮ್ಮ ವೃತ್ತಿಪರ ವೃತ್ತಿಜೀವನದಲ್ಲಿ ವಜ್ರದಂತೆ ಹೊಳೆಯುವ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲು ಯಾವುದೇ ರಾಜಿ ಇಲ್ಲದೇ, ಗುಣಮಟ್ಟದ ಶಿಕ್ಷಣವನ್ನು ನೀಡುವ ಏಕೈಕ ಧ್ಯೇಯವಾಕ್ಯದೊಂದಿಗೆ ಶರಣಬಸವೇಶ್ವರ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜನ್ನು ಸ್ಥಾಪಿಸಿದ್ದಾರೆ. ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜುಗಳಿಂದ ಸರಾಸರಿ ೫೦೦ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳು ತೇರ್ಗಡೆಯಾಗಿ, ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ದೇಶದ ವಿವಿಧ ಭಾಗಗಳಲ್ಲಿರುವ ಎಐಐಎಂಎಸ್ನಲ್ಲಿ ಉಚಿತ ಪ್ರವೇಶಗಳನ್ನು ಪಡೆಯುತ್ತಾರೆ. ಎಸ್ಬಿಆರ್ ಪಿಯು ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ೩೦೦ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೇರಿದಂತೆ ೫ ಕೋಟಿ ರೂ.ಗಳ ವಿದ್ಯಾರ್ಥಿವೇತನವನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ ಎಂದು ಡಾ. ಅವ್ವಾಜಿ ತಿಳಿಸಿದರು.
ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಸಮಾರಂಭದ ಆರಂಭದಲ್ಲಿ ಮಾತನಾಡಿ, ವೈದ್ಯರು ಸಂಸ್ಥಾನಕ್ಕೆ ನೀಡಿದ ಸೇವೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ವೈದ್ಯಕೀಯ ವೃತ್ತಿಯು ಒಂದು ಉದಾತ್ತ ವೃತ್ತಿ ಎಂಬ ನಾಣ್ಣುಡಿಗೆ ಅನುಗುಣವಾಗಿ, ವೈದ್ಯರು ನಿಜವಾಗಿಯೂ ಉದಾತ್ತರು ಮತ್ತು ನಿಸ್ವಾರ್ಥಿಗಳು ಎಂದು ಶ್ಲಾಘಿಸಿದರು.
ಮುಗಳನಾಗಾವಿಯ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೂಜ್ಯ ಅಭಿನವ ಸಿದ್ದಲಿಂಗ ಶಿವಾಚಾರ್ಯರಿಗೆ ವಾರ್ಷಿಕವಾಗಿ ನೀಡುವ “ಅಪ್ಪ” ಪ್ರಶಸ್ತಿಯನ್ನು ಡಾ. ಅವ್ವಾಜಿ ಪ್ರದಾನ ಮಾಡುತ್ತಾ, ಶರಣಬಸವೇಶ್ವರ ಸಂಸ್ಥಾನ ಮತ್ತು ಕಟ್ಟಿಮನಿ ಹಿರೇಮಠ ಸಂಸ್ಥಾನದ ನಡುವಿನ ಬಾಂಧವ್ಯ ಎರಡು ಶತಮಾನಗಳಿಗೂ ಹೆಚ್ಚು ಕಾಲದಿಂದ ಕೂಡಿದೆ ಮತ್ತು ಸ್ವಾಮೀಜಿಗಳು ಸಂಸ್ಥಾನದ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
“ಅಪ್ಪ” ಪ್ರಶಸ್ತಿ ಸ್ವೀಕರಿಸಿ, ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು ತಮ್ಮ ಭಾಷಣದಲ್ಲಿ, ನನಗೆ ಪೂಜ್ಯ ಡಾ. ಅವ್ವಾಜಿಯವರ ಅಮೃತ ಹಸ್ತದಿಂದ ಪ್ರದಾನ ಮಾಡಿದ “ಅಪ್ಪ” ಪ್ರಶಸ್ತಿಯನ್ನು ಸಂತ ಶರಣಬಸವೇಶ್ವರರು ಮತ್ತು ಸಂಸ್ಥಾನದ ಎಲ್ಲಾ ಪೀಠಾಧಿಪತಿಗಳು ನನಗೆ ನೀಡಿದ ಆಶೀರ್ವಾದವೆಂದು ಪರಿಗಣಿಸಿರುವುದಾಗಿ ತಿಳಿಸಿದರು.
ಡಾ.ಪಿ.ಎಂ.ಬಿರಾದಾರ್, ಡಾ.ಪ್ರತಿಮಾ ಡಾ.ಎಸ್.ಬಿ.ಕಾಮರೆಡ್ಡಿ, ಡಾ.ಮನಾಲಿ ಡಾ.ಸಚಿನ್ ದೇಶಪಾಂಡೆ, ಡಾ.ವಂದನಾ ಡಾ.ಸಂತೋಷ ಕಾಮಶೆಟ್ಟಿ, ಡಾ.ವೀರಮ್ಮ ಡಾ.ನಂದೀಶ್ ಜೀವಣಗಿ, ಡಾ.ಶರಣಮ್ಮ ಡಾ.ನಿದೀಶ್ ನಿಷ್ಠಿ, ಡಾ. ಆಯಿಷಾ ಫಾತಿಮಾ ಡಾ. ಮಹ್ಮದ್ ಅಬ್ದುಲ್ ಬಷೀರ್, ಡಾ. ವೀಣಾ ಡಾ ವಿಕ್ರಂ ಸಿದ್ಧಾರೆಡ್ಡಿ, ಡಾ ರೂಪಾಲಿ ಡಾ ಮಂಜುನಾಥ್ ದೋಶೆಟ್ಟಿ, ಶ್ರೀಮತಿ. ಗೌರಿ ಡಾ. ಮಂಜುನಾಥ್ ಅಣಕಲ್, ಶ್ರೀಮತಿ ಮಾನಸಾ ಡಾ. ಪ್ರಶಾಂತ್ ಕುಲಕರ್ಣಿ, ಮತ್ತು ಡಾ ಸಿದ್ದಮ್ಮ ಡಾ ವೀರೇಶ ಆಳಂದ ಅವರನ್ನು “ಶರಣ ವೈದ್ಯ ಸೇವಾ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಡಾ. ರಾಜಶ್ರೀ ಡಾ. ವಿಶ್ವನಾಥ ರೆಡ್ಡಿ, ಅವರು ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಹೋದ ಕಾರಣ ಗೈರುಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ಪ್ರಸಿದ್ಧ ಸಂಗೀತ ಗಾಯಕರಾದ ಶ್ರೀ ಮಲ್ಲಿಕಾರ್ಜುನ ಮಣ್ಣೂರ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ. ಅವ್ವಾಜಿ ಅವರು ಆಂಗ್ಲ ರಾಷ್ಟ್ರೀಯ ದಿನಪತ್ರಿಕೆ ದಿ ಹಿಂದೂ ಹೊರತಂದ ಶರಣಬಸವೇಶ್ವರ ಸಂಸ್ಥಾನದ ಕುರಿತ ವಿಶೇಷ ಪ್ರಕಟಣೆಯಾದ “ದಾಸೋಹ ಮತ್ತು ಮಾನವೀಯತೆ” ಮತ್ತು
ಕಲಬುರಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಶರಣಸತಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು ಶರಣಸತಿ ಸ್ಮರಣ ಸಂಚಿಕೆ ಸಂಪಾದಕರಾದ ಶರಣಗೌಡ ಪಾಟೀಲ್ ಪಾಳಾ ಹಾಗೂ ಉಪ ಸಂಪಾದಕರಾದ ಪ್ರೊ ಯಶವಂತರಾಯ ಅಷ್ಠಗಿ ಇದ್ದರು. ಪ್ರಖ್ಯಾತ ಹೃದ್ರೋಗ ತಜ್ಞ ಮತ್ತು ಶರಣಬಸವ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ. ನಿರಂಜನ್ ವಿ. ನಿಷ್ಠಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಎಲ್ಲರನ್ನೂ ಸ್ವಾಗತಿಸಿದರು. ಕುಮಾರಿ ಭವಾನಿ ಎಸ್ ಅಪ್ಪಾ, ಕುಮಾರಿ ಶಿವಾನಿ ಎಸ್ ಅಪ್ಪಾ ಮತ್ತು ಕುಮಾರಿ ಮಹೇಶ್ವರಿ ಎಸ್ ಅಪ್ಪಾ ಪ್ರಾರ್ಥನಾ ಗೀತೆ ಹಾಡಿದರು. ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಕುಲಸಚಿವರಾದ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಮೌಲ್ಯಮಾಪನ ಕುಲಸಚಿವ ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ ಪ್ರೊ. ಶಿವಕುಮಾರ ಜವಳಿಗಿ, ಹಣಕಾಸು ಅಧಿಕಾರಿ ಡಾ. ಕಿರಣ್ ಮಾಕಾ, ಡಾ. ಅಲ್ಲಮಪ್ರಭು ದೇಶಮುಖ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
