ಮಹಿಳೆಯರ ಸ್ವಾವಲಂಬನೆಗೆ ಟೇಲರಿಂಗ್ ತರಬೇತಿ ಉತ್ತಮ ಹೆಜ್ಜೆ — ಸಿದ್ದಲಿಂಗ ಶಿವಾಚಾರ್ಯ
ಮಹಿಳೆಯರ ಸ್ವಾವಲಂಬನೆಗೆ ಟೇಲರಿಂಗ್ ತರಬೇತಿ ಉತ್ತಮ ಹೆಜ್ಜೆ — ಸಿದ್ದಲಿಂಗ ಶಿವಾಚಾರ್ಯ
ಶಹಾಬಾದ ಮಹಿಳೆಯರಿಗೆ ಟೇಲರಿಂಗ್ ತರಬೇತಿ ನೀಡಿ, ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ವಿತರಿಸುವ ಮೂಲಕ ಧಾನೇಶ್ವರಿ ಸೇವಾ ಸಂಸ್ಥೆಯು ಮಹಿಳೆಯರ ಸ್ವಾವಲಂಬನೆಗೆ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಸಿದ್ದಲಿಂಗ ಶಿವಾಚಾರ್ಯ ಹೇಳಿದರು.
ತಾಲೂಕಿನ ಮುಗಳನಾಗಾವಿ ಗ್ರಾಮದ ಕಟ್ಟಿಮನಿ ಹಿರೇಮಠದ ಸಭಾಂಗಣದಲ್ಲಿ ಧಾನೇಶ್ವರಿ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳೆಯರ ಟೇಲರಿಂಗ್ ತರಬೇತಿ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಕೌಶಲ್ಯ ಕಲಿಸಿ, ಅದನ್ನು ಜೀವನೋಪಾಯದ ಮಾರ್ಗವನ್ನಾಗಿ ರೂಪಿಸಲು ಅವಕಾಶ ಕಲ್ಪಿಸುತ್ತಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ ಎಂದರು.
ಮಹಿಳೆಯರು ಮನೆಯಲ್ಲಿಯೇ ಟೇಲರಿಂಗ್ ವೃತ್ತಿ ಕೈಗೊಂಡು ಆದಾಯ ಗಳಿಸುವ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ನೆರವಾಗಬಹುದು. ಇದರಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಮನೋಭಾವವೂ ಬೆಳೆಯುತ್ತದೆ. ಎಂದು ಹೇಳಿದರು.
ಪತ್ರಕರ್ತ, ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕ ಶರಣಗೌಡ ಪಾಟೀಲ ಪಾಳಾ ಮಾತನಾಡಿ, ತರಬೇತಿ ಪಡೆದ ಮಹಿಳೆಯರು ಕಲಿತ ಕೌಶಲ್ಯವನ್ನು ಜೀವನೋಪಾಯವನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಸಾಧ್ಯವಾದರೆ ಇತರ ಮಹಿಳೆಯರಿಗೂ ಕೌಶಲ್ಯ ಕಲಿಸುವ ಮೂಲಕ ಸ್ವಾವಲಂಬನೆಯ ಚಳವಳಿಯನ್ನು ವಿಸ್ತರಿಸಬೇಕು ಎಂದು ಹೇಳಿದರು.
ಸಿದ್ರಾಮಪ್ಪ ತುಪ್ಪದ, ಬಿಜೆಪಿ ಮುಖಂಡರಾದ ಸಂಗಮ್ಮ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.ವೀರೂಸ್ವಾಮಿ ನಿರೂಪಿಸಿದರು.
ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕೌಶಲ್ಯವೇ ಶಕ್ತಿ, ಸ್ವಾವಲಂಬನೆಯೇ ಮಹಿಳೆಯರ ನಿಜವಾದ ಸಬಲೀಕರಣ’ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಒಬ್ಬ ಮಹಿಳೆ ಸ್ವಾವಲಂಬಿಯಾದರೆ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಬೀರುತ್ತದೆ. ಕುಟುಂಬ ಸ್ವಾವಲಂಬಿಯಾದಾಗ ಸಮಾಜವೂ ಬಲಿಷ್ಠವಾಗುತ್ತದೆ
ಪತ್ರಕರ್ತ ಶರಣಗೌಡ ಪಾಟೀಲ ಪಾಳಾ

