ಹಾಳಾದ ಗ್ರಾಮೀಣ ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಪ್ರಭು ಚವ್ಹಾಣ ಒತ್ತಾಯ
ಹಾಳಾದ ಗ್ರಾಮೀಣ ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಪ್ರಭು ಚವ್ಹಾಣ ಒತ್ತಾಯ
ಕಮಲನಗರ:ಔರಾದ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿಪಡಿಸಬೇಕೆಂದು ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಒತ್ತಾಯಿಸಿದ್ದಾರೆ
ಬೆಂಗಳೂರಿನಲ್ಲಿ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ಕ್ಷೇತ್ರದ ಅನೇಕ ಗ್ರಾಮೀಣ ರಸ್ತೆಗಳು ಮಳೆಯಿಂದ ತೀವ್ರವಾಗಿ ಹಾನಿಗೊಳಗಾಗಿದ್ದು, ರಸ್ತೆಗಳು ಗುಂಡಿಮಯವಾಗಿವೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಹಾಗೂ ವಾಹನ ಸವಾರರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ವೈದ್ಯಕೀಯ ಸೇವೆಗಾಗಿ ಆಸ್ಪತ್ರೆಗೆ ತೆರಳುವ ರೋಗಿಗಳು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ರೈತರು ತಮ್ಮ ಕೃಷಿ ಉತ್ಪನ್ನಗಳು ಮತ್ತು ದವಸ-ಧಾನ್ಯಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಮದಾಪೂರ–ಕುನಮಾರಪಳ್ಳಿ ಬಾರ್ಡರ್, ಏಕಂಬಾ–ಲಿಂಗಿ, ಹೊಳಸಮುದ್ರ–ತೋರ್ಣಾ, ಹಿಪ್ಪಳಗಾಂವ ರಸ್ತೆ, ಎಸ್ಎಚ್ 122 - ಭಂಡಾರಕುಮಟಾ ವಾಯಾ: ಹಂದಿಕೇರಾ, ಧುಡುಕನಾಳ-ಬಾದಲಗಡಂವ, ಸುಸೈಟಿ ತಾಂಡಾ-ಖೇಮಾ ನಾಯಕ್ ತಾಂಡಾ, ಕಾಳಾಪಟ್ಟಿ ತಾಂಡಾ ಸಂಪರ್ಕ ರಸ್ತೆ, ಚಿಮ್ಮೇಗಾಂವ-ಚಿರ್ಕಿ ತಾಂಡಾ, ಖೇರ್ಡಾ ಬಿ–ಹೊಕ್ರಾಣಾ, ಕರಂಜಿ ಬಿ–ದೇಗುಲವಾಡಿ, ಮುಂಗನಾಳ–ಗೌಂಡಗಾಂವ ಕ್ರಾಸ್, ನಿಡೋದಾ–ಹಾಲಳ್ಳಿ, ಹಸ್ಸಿಖೇರಾ-ತಾಂಡಾ, ಮುರ್ಗ್-ಎನ್ಎಚ್ 50, ಕಮಲನಗರ-ಸೋನಾಳ, ವಡಗಾಂವ-ಕೌಠಾ, ಧೂಪತಮಹಾಗಾಂವ-ಹೆಡಗಾಪೂರ, ಕುನಮಾರಪಳ್ಳಿ-ಎಂ.ಎಸ್ ಬಾರ್ಡರ್, ನಾಗೂರ ಎಂ ಸಂಪರ್ಕ ರಸ್ತೆ, ವಲ್ಲೇಪೂರ-ಕಂದಗೂಳ, ಹಸ್ಸಿಖೇರಾ-ಗೌಂಡಗಾಂವ, ಕಮಲನಗರ-ಸೋನಾಳವಾಡಿ, ಮುರ್ಗ್-ದೇವಣಿ, ಚಿಕ್ಲಿ(ಜೆ)-ಜಂಬಗಿ, ಎಸ್ಎಚ್-15- ಕುನಮಾರಪಳ್ಳಿ ಬಾರ್ಡರ್, ವಾಗನಗೇರಾ-ವಾಗನಗೇರಾ ಕ್ರಾಸ್, ಎಕಲಾರ-ತೇಗಂಪೂರ, ಬಜರಂಗ್ ತಾಂಡಾ-ಚಿಂತಾಮಣಿ ತಾಂಡಾ, ಶಂಬೆಳ್ಳಿ-ಎನ್ಎಚ್ ಸೇರಿದಂತೆ ಅತ್ಯಂತ ಅವಶ್ಯಕವಾಗಿರುವ ವಿವಿಧ ರಸ್ತೆಗಳನ್ನು ತುರ್ತು ಆದ್ಯತೆಯ ಮೇರೆಗೆ ಸುಧಾರಿಸಿ ಅಭಿವೃದ್ಧಿಪಡಿಸುವಂತೆ ತಿಳಿಸಿದ್ದಾರೆ.
ಜೊತೆಗೆ ಗ್ರಾಮ ಸಂಚಾರದ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಸಾರ್ವಜನಿಕರಿಂದ ಬೇಡಿಕೆಯಿರುವ ಫಾರ್ಮೇಶನ್ ರಸ್ತೆಗಳನ್ನು ನಿರ್ಮಿಸಿಕೊಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಇದು ತಾಲ್ಲೂಕು ಪಂಚಾಯತ ಅಧಿಕಾರಿಗಳ ಗಮನಕ್ಕೂ ಇದೆ. ಈ ರಸ್ತೆಗಳ ಸುಧಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ
ವಿಧಾನಸಭಾ ಅಧಿವೇಶನದಲ್ಲಿಯೂ ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ. ಪ್ರಸಕ್ತ ಮಳೆಗಾಲದಲ್ಲಿ ರಸ್ತೆಗಳ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ವಿಳಂಬ ಮಾಡದೆ ತುರ್ತು ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಬೇಕೆಂದು ಕೋರಲಾಗಿದೆ. ನಮ್ಮ ಜಿಲ್ಲೆಯವರೇ ಆದ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

