ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಿ: ಉತ್ನಾಳ ಶ್ರೀ

ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಿ: ಉತ್ನಾಳ ಶ್ರೀ

ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಿ: ಉತ್ನಾಳ ಶ್ರೀ

ಯಾಳವಾರದಲ್ಲಿ “ಅಮೃತ ಹಸ್ತದ ಮಣ್ಣಿನ ಗಣೇಶ” ಪರಿಸರ ಸ್ನೇಹಿ ಗಣಪತಿ ಶಿಬಿರಕ್ಕೆ ಚಾಲನೆ

ದೇವರಹಿಪ್ಪರಗಿ: ಗಣೇಶೋತ್ಸವದಲ್ಲಿ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಬಳಕೆಯನ್ನು ನಿರ್ಬಂಧಿಸಿ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಬಳಕೆಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಉತ್ನಾಳ ಹಿರೇಮಠದ ಪ.ಪೂ. ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಯಾಳವಾರ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ), ವಿಜಯಪುರ ಹಾಗೂ ಬಸವ ಹಸಿರು ಬಳಗ (ರಿ), ದೇವರಹಿಪ್ಪರಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಅಮೃತ ಹಸ್ತದ ಮಣ್ಣಿನ ಗಣೇಶ” ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಕಾ ಕಲಾ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಉತ್ನಾಳ ಶ್ರೀ ಸಂಗಮೇಶ್ವರ ಸ್ವಾಮಿಗಳು ಅವರು ಮಾತನಾಡಿದರು.

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಲವು ವರ್ಷಗಳಿಂದ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದೇ ಆಶಯದೊಂದಿಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನುರಿತ ಕಲಾವಿದರ ತಂಡವು ಶಿಬಿರದಲ್ಲಿ ಭಾಗವಹಿಸಿ, ಬಸವ ಹಸಿರು ಬಳಗದ ಯುವಕರು ಹಾಗೂ ಕಲಾ ಆಸಕ್ತರಿಗೆ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶ್ರೀಗಳು ಹೇಳಿದರು.

ಶಿಬಿರದಲ್ಲಿ ತಯಾರಾಗುವ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿಜಯಪುರ ಜಿಲ್ಲೆಯ ಸುಮಾರು 120 ಹಳ್ಳಿಗಳಿಗೆ ಉಚಿತವಾಗಿ ತಲುಪಿಸುವ ಸಂಕಲ್ಪ ಅತ್ಯಂತ ಮಹತ್ವದ್ದಾಗಿದೆ. ಇದೇ ರೀತಿಯಲ್ಲಿ ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು, ಗಣೇಶ ಮಂಡಳಿಗಳು ಹಾಗೂ ಮೂರ್ತಿ ತಯಾರಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಗೆ ಮುಂದಾಗಬೇಕು. ಪರಿಸರ ಸಂರಕ್ಷಣೆಯ ಕುರಿತು ಪ್ರತಿಯೊಬ್ಬರಲ್ಲೂ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಯಾಳವಾರ ಗ್ರಾಮದ ಪುರಾಣಿಕರಾದ ಬಸಯ್ಯ ಶಾಸ್ತ್ರಿಗಳು ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ನೈಸರ್ಗಿಕ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಸಂಕಲ್ಪ ಮಾಡಲಾಗಿದೆ. ಯುವಕರು ಹಾಗೂ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಕಾಳಜಿಯ ಸಂದೇಶವನ್ನು ಸಮಾಜಕ್ಕೆ ಸಾರಬೇಕು. ಉತ್ತಮ ಆಶಯದೊಂದಿಗೆ ಕೈಗೊಂಡಿರುವ ಈ ಸಂಕಲ್ಪ ಯಶಸ್ವಿಯಾಗಲಿ, ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ಗಡೇದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಹಾಗೂ ಆರೋಗ್ಯ ಸ್ನೇಹಿ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಸುಮಾರು 120 ಹಳ್ಳಿಗಳಿಗೆ ತಲುಪಿಸುವ ಸಂಕಲ್ಪ ಕೈಗೊಂಡಿರುವುದು ಸಂತಸದ ವಿಷಯವಾಗಿದೆ. ಇಂತಹ ಸಾರ್ಥಕ ಕಾರ್ಯಕ್ಕೆ ಕೈಜೋಡಿಸಿರುವ ಎಲ್ಲಾ ಕಲಾವಿದರು ಹಾಗೂ ಬಸವ ಹಸಿರು ಬಳಗದ ಪದಾಧಿಕಾರಿಗಳನ್ನು ಅಭಿನಂದಿಸಿದರು.

ದೃಶ್ಯಬಿಂಬ ಕಲಾ ಪ್ರತಿಷ್ಠಾನದ ಅಧ್ಯಕ್ಷ ಸತೀಶ ಕೇಮಶೆಟ್ಟಿ “ಮೂಲ ಕಲೆ – ಭಕ್ತಿ – ಪರಿಸರ” ಎಂಬ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮಣ್ಣಿನ ಸಾಂಪ್ರದಾಯಿಕ ಮೂರ್ತಿಕಲೆಯನ್ನು ಉಳಿಸುವುದರ ಜೊತೆಗೆ, ಕಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಯುವ ಕಲಾವಿದರಿಗೆ ಪ್ರಾಯೋಗಿಕ ತರಬೇತಿ ನೀಡುವುದು ಮತ್ತು ಪರಿಸರ ಸ್ನೇಹಿ ಗಣೇಶೋತ್ಸವದ ಸಂದೇಶವನ್ನು ಗ್ರಾಮೀಣ ಭಾಗಕ್ಕೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಣಕನಾಳ, ಭಕ್ತಿ ಮತ್ತು ಪರಿಸರ ಸಂರಕ್ಷಣೆಯನ್ನು ಒಂದಾಗಿ ತೆಗೆದುಕೊಂಡು ಹೋಗುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಲಾಗಿದೆ. ಬಸವ ಭಕ್ತರು, ಯುವಕರು ಹಾಗೂ ಕಲಾವಿದರು ಒಟ್ಟಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ, ಪರಿಸರ ಸ್ನೇಹಿ ಗಣೇಶೋತ್ಸವದ ಸಂದೇಶವನ್ನು ಹೆಚ್ಚಿನ ಸಂಖ್ಯೆಯ ಗ್ರಾಮಗಳಿಗೆ ತಲುಪಿಸುವುದು ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೃಶ್ಯಬಿಂಬ ಕಲಾ ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಕೇಮಶೆಟ್ಟಿ, ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಣಕನಾಳ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಹಿರಿಯ ಕಲಾವಿದರಾದ ರಮೇಶ ಸಾಸನೂರ, ಕೆಂಚಪ್ಪ ಬಡಿಗೇರ, ಅಶೋಕ್ ಕುಂಟೋಜಿ, ಮೌನೇಶ್ ಯಾಳಗಿ, ನಾರಾಯಣ ಪಡಿಯಪ್ಪನವರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹಲವು ಕಲಾವಿದರು, ಬಸವ ಹಸಿರು ಬಳಗದ ಪದಾಧಿಕಾರಿಗಳು, ಬಸವ ಭಕ್ತರು, ಯುವಕರು ಹಾಗೂ ಕಲಾ ಆಸಕ್ತರು ಉಪಸ್ಥಿತರಿದ್ದರು.

ಚಿತ್ರಕಲಾ ಶಿಕ್ಷಕರಾದ ಎಸ್.ಎಸ್. ಬಂಟನೂರ ಹಾಗೂ ಎಚ್.ಟಿ. ಕರಡಿ ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ–ವಂದನೆ ನೆರವೇರಿಸಿದರು. ಕೆಂಚಪ್ಪ ಬಡಿಗೇರ ಒಂದು ಗಣೇಶ ಮೂರ್ತಿಯನ್ನು ಪ್ರತ್ಯಕ್ಷತೆ ನೀಡಿದರು.

ಬಸವ ಹಸಿರು ಬಳಗದ ಸಮಸ್ತ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಉದ್ಘಾಟನೆಗೊಂಡಿತು.

“ಮಣ್ಣಿನ ಕಲೆ ಉಳಿಸೋಣ – ಪರಿಸರ ಕಾಪಾಡೋಣ – ಭಕ್ತಿಯೊಂದಿಗೆ ಗಣೇಶೋತ್ಸವ ಆಚರಿಸೋಣ”

ಎಂಬ ಸಂದೇಶದೊಂದಿಗೆ ಆರಂಭಗೊಂಡಿರುವ ಈ ವಿಶಿಷ್ಟ ಶಿಬಿರವು ಭಕ್ತಿ, ಮೂಲ ಕಲೆ ಮತ್ತು ಪರಿಸರ ಸಂರಕ್ಷಣೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಾರ್ಥಕ ಪ್ರಯತ್ನವಾಗಿದೆ.