371(ಜೆ) ಅನುಷ್ಠಾನ: ಅಧಿಕಾರಿಗಳೊಂದಿಗೆ ಸಚಿವರ ಜಂಟಿ ಸಭೆ, ನಿಯಮಾನುಸಾರ ನೇಮಕಾತಿಗೆ ಕಟ್ಟುನಿಟ್ಟಾದ ಸೂಚನೆ

371(ಜೆ) ಅನುಷ್ಠಾನ: ಅಧಿಕಾರಿಗಳೊಂದಿಗೆ ಸಚಿವರ ಜಂಟಿ ಸಭೆ, ನಿಯಮಾನುಸಾರ ನೇಮಕಾತಿಗೆ ಕಟ್ಟುನಿಟ್ಟಾದ ಸೂಚನೆ
ವಿಕಾಸಸೌಧ, ಬೆಂಗಳೂರು:ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದಂತೆ ಸಂವಿಧಾನದ 371(ಜೆ) ವಿಧಾನದ ಅಡಿಯಲ್ಲಿ ಹುದ್ದೆಗಳ ನೇಮಕಾತಿಯನ್ನು ಕಟ್ಟುನಿಟ್ಟಾಗಿ ನಿಯಮಾನುಸಾರ ನಡೆಸುವ ಕುರಿತು ಇಂದು ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಮತ್ತು ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಮಹತ್ವದ ಜಂಟಿ ಸಭೆ ನಡೆಯಿತು.
ಸಭೆಯಲ್ಲಿ 371(ಜೆ) ಅಡಿ ಹುದ್ದೆಗಳ ನೇಮಕಾತಿ ಸರ್ಕಾರದ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲ ಎಂಬ ಕುರಿತು ಗಂಭೀರ ಚರ್ಚೆ ನಡೆಯಿತು. 2023ರ ಸರ್ಕಾರಿ ಆದೇಶದ ಪ್ರಕಾರ ಈಗಿನಿಂದಲೇ ಎಲ್ಲಾ ನೇಮಕಾತಿಗಳು ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಈಗಾಗಲೇ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದರೂ, ಕೆಲವು ಇಲಾಖೆಗಳಲ್ಲಿ ಗೊಂದಲವಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪಷ್ಟ ಮಾರ್ಗದರ್ಶನ ನೀಡುವಂತೆ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
371(ಜೆ) ಅನುಷ್ಠಾನದ ಬಗ್ಗೆ ಇರುವ ಗೊಂದಲಗಳ ನಿವಾರಣೆಗೆ ಮುಂದಿನ ತಿಂಗಳು ಸಚಿವ ಸಂಪುಟ ಉಪ ಸಮಿತಿಯ ಸಭೆ ಕರೆದಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಈ ವೇಳೆ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
KKP ಪತ್ರಿಕೆ